ADVERTISEMENT

‘ಯುವಜನತೆಗೆ ಮಾನವೀಯತೆ ಅರಿವು ಅಗತ್ಯ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 9:29 IST
Last Updated 27 ಡಿಸೆಂಬರ್ 2017, 9:29 IST

ಧಾರವಾಡ: ‘ದೇಹದಲ್ಲಿ ಮನೆ ಮಾಡಿಕೊಂಡಿರುವ ಕಾಮ, ಕ್ರೋಧ, ಮೋಹ, ಮದ, ಮತ್ಸರಗಳನ್ನು ತ್ಯಜಿಸಿದಾಗ ಮಾತ್ರ ಮಾನವೀಯತೆ ಅರಿವು ಬರಲು ಸಾಧ್ಯ' ಎಂದು ಮುಂಡರಗಿಯ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಹುರಕಡ್ಲಿ ಮಹಾವಿದ್ಯಾಲಯದ ಆವರಣಲ್ಲಿ ‘ಬಸವದರ್ಶನ’ ವಿಷಯದ ಕುರಿತು ಪ್ರವಚನ ನೀಡಿದ ಅವರು, 'ಪ್ರಾಣಿಗಳಲ್ಲಿ ಮಾನವನಿಗೆ ವೈಶಿಷ್ಟ್ಯ ತಂದು ಕೊಟ್ಟಿದ್ದು ಸೃಷ್ಟಿ. ಪ್ರಾಣಿಗಿಂತ ಮನುಷ್ಯನಿಗೆ ಅರಿವಿನ ಪ್ರಜ್ಞೆ ಹೆಚ್ಚಿದೆ.

ಆದರೂ ಮಾನವ ಪ್ರಾಣಿಗಿಂತ ಕ್ರೂರತನ ಬೆಳೆಸಿಕೊಂಡು ಅತ್ಯಾಚಾರ, ಅನಾಚಾರದಂತಹ ಕೃತ್ಯಗಳನ್ನು ಎಸಗುತ್ತಿರುವುದು ಖೇದಕರ ಸಂಗತಿ. ಮನುಷ್ಯನ ಸ್ವಭಾವ ವಿಕೃತವಾಗಬಾರದು. ಭೂಮಿ ಮೇಲಿನ ಪ್ರತಿಯೊಂದು ಜೀವಿಯನ್ನು ಗೌರವಿಸುವ ಮನೋಭಾವನೆ ಬೆಳೆಯಬೇಕು’ ಎಂದರು.

ADVERTISEMENT

‘ಜನರು ಹೋಳಿ ಹುಣ್ಣಿಮೆಯಂದು ಕ್ವಿಂಟಲ್‌ಗಟ್ಟಲೆ ಕಟ್ಟಿಗೆ ತಂದು ಕಾಮಣ್ಣನ ಮೂರ್ತಿಯಿಟ್ಟು ಕಾಮದಹನ ಮಾಡುವ ಬದಲಾಗಿ ತಮ್ಮಲ್ಲಿರುವ ಕಾಮವನ್ನು ಸುಟ್ಟು ಹಾಕುವ ವಿಚಾರ ಮಾಡಬೇಕು. ಅಂದರೆ ಮಾತ್ರ ಅತ್ಯಾಚಾರದಂತಹ ಕೃತ್ಯಗಳು ತೊಲಗಲು ಸಾಧ್ಯ. ಯುವಜನರಿಗೆ ಹಬ್ಬ ಹರಿದಿನದ ಬಗ್ಗೆ ಅರಿವಿಲ್ಲದಂತಾಗುತ್ತಿರುವ ಕಾರಣ ಹಾದಿ ತಪ್ಪುತ್ತಿದ್ದಾರೆ. ಹೊಸ ವರ್ಷಾಚರಣೆ ಹೆಸರಿನಲ್ಲಿ ಕುಣಿದು ಕುಪ್ಪಳಿಸುವ ಸಂಸ್ಕೃತಿಗೆ ಮಾರು ಹೋಗಿರುವ ಯುವಸಮುದಾಯ ಯಾವ ಮಹಾತ್ಮರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ ಎಂಬ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.