ADVERTISEMENT

ವಿಜಯೋತ್ಸವ: ಮಾತಿನ ಚಕಮಕಿ

ಬಾಬರಿ ಮಸೀದಿ ಧ್ವಂಸ ಖಂಡಿಸಿ ಕರಾಳ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 9:50 IST
Last Updated 7 ಡಿಸೆಂಬರ್ 2017, 9:50 IST
ಧಾರವಾಡದ ವಿವೇಕಾನಂದ ವೃತ್ತದ ಬಳಿ ಅನುಮತಿ ಇಲ್ಲದೆ ವಿಜಯೋತ್ಸವ ಆಚರಿಸುತ್ತಿರುವವರನ್ನು ವಶಕ್ಕೆ ಪಡೆಯಲು ಮುಂದಾದಾಗ ಪೊಲೀಸರೊಂದಿಗೆ ನಡೆದ ಮಾತಿನ ಚಕಮಕಿ ದೃಶ್ಯ
ಧಾರವಾಡದ ವಿವೇಕಾನಂದ ವೃತ್ತದ ಬಳಿ ಅನುಮತಿ ಇಲ್ಲದೆ ವಿಜಯೋತ್ಸವ ಆಚರಿಸುತ್ತಿರುವವರನ್ನು ವಶಕ್ಕೆ ಪಡೆಯಲು ಮುಂದಾದಾಗ ಪೊಲೀಸರೊಂದಿಗೆ ನಡೆದ ಮಾತಿನ ಚಕಮಕಿ ದೃಶ್ಯ   

ಧಾರವಾಡ: ಅವಳಿ ನಗರದಲ್ಲಿ ಒಂದೆಡೆ ವಿಜಯೋತ್ಸವ ಆಚರಿಸಿದರೆ, ಇನ್ನೊಂದೆಡೆ ಕರಾಳ ದಿನ ಆಚರಿಸಲಾಯಿತು. ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಯಿತು.

ಬಾಬರಿ ಮಸೀದಿ ಧ್ವಂಸಕ್ಕೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅನುಮತಿ ಪಡೆಯದೆ ವಿಜಯೋತ್ಸವ ಆಚರಿಸುತ್ತಿದ್ದ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಕಾರ್ಯಕರ್ತರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

ವಿವೇಕಾನಂದ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆಗೆ ಮುಂದಾದರು. ಅದನ್ನು ಪೊಲೀಸರು ತಡೆದರು. ಆಗ ಪೊಲೀಸರು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ADVERTISEMENT

ಪೊಲೀಸರ ಮನವಿಯ ಮಧ್ಯೆಯೇ ವಿಜಯೋತ್ಸವಕ್ಕೆ ಮುಂದಾದ ಪಾಲಿಕೆ ಸದಸ್ಯ ಸಂಜಯ ಕಪಟಕರ, ಯುವ ಮೋರ್ಚಾ ಅಧ್ಯಕ್ಷ ಶರಣು ಅಂಗಡಿ, ನಗರ ಘಟಕದ ಅಧ್ಯಕ್ಷ ಯಲ್ಲಪ್ಪ ಯರವಾಳದ ಸೇರಿದಂತೆ 20ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಇನ್ನೊಂದೆಡೆ ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ ಕಮ್ಯುನಿಸ್ಟ್‌ ಪಕ್ಷದ ಕಚೇರಿಯಲ್ಲಿ ಪ್ರತಿಭಟನಾ ಸಭೆ ನಡೆಸುವ ಮೂಲಕ ಸಿಪಿಐ, ಸಿಪಿಐಎಂ ಕಾರ್ಯಕರ್ತರು ಕರಾಳ ದಿನ ಆಚರಿಸಿದರು.

ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ‘ಬಾಬರಿ ಮಸೀದಿಯ ಧ್ವಂಸ ಕೇವಲ ಒಂದು ಸ್ಮಾರಕದ ಧ್ವಂಸವಲ್ಲ. ಇದು ಜನರ ಭಾವನೆಗಳಿಗೆ ಧಕ್ಕೆ ತಂದ ಹೇಯ ಕೃತ್ಯವಾಗಿದೆ’ ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಸೊಪ್ಪಿನ, ಲೇಖಕಿ ಸುನಂದಾ ಕಡಮೆ, ಮುಖಂಡರಾದ ರಾಘವೇಂದ್ರ ಆಯಿ, ಕರಿಯಣ್ಣವರ್, ಬಿ.ಎನ್. ಪೂಜಾರ, ಎ.ಎಂ.ಖಾನ್, ಗಂಗಾಧರ ಬಡಿಗೇರ, ಲಕ್ಷ್ಮಣ ಜಡಗಣ್ಣವರ, ಮಹೇಶ ಪತ್ತಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.