ADVERTISEMENT

ಶೌಚಾಲಯಕ್ಕೆ ಬೀಗ; ಸಾರ್ವಜನಿಕರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 9:46 IST
Last Updated 16 ಜುಲೈ 2017, 9:46 IST

ಹುಬ್ಬಳ್ಳಿ: ಇಲ್ಲಿ ಮಂಟೂರು ರಸ್ತೆಯ ಅಂಬೇಡ್ಕರ್ ಕಾಲೊನಿಯಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಹಾಕಿರುವುದರಿಂದ ಬಳಕೆಗೆ ಲಭ್ಯವಾಗದೇ ಸ್ಥಳೀಯರು ಬಯಲು ಶೌಚಾಲಯಕ್ಕೆ ಹೋಗುವುದು ಅನಿವಾರ್ಯವಾಗಿದೆ.

ಮಹಾನಗರ ಪಾಲಿಕೆಯಿಂದ ಅಂದಾಜು 12 ವರ್ಷಗಳ ಹಿಂದೆ ₹ 4 ಲಕ್ಷ ಮೊತ್ತದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಕಟ್ಟಡವು ಬಹುತೇಕ ಶಿಥಿಲವಾಗಿದೆ. ಸ್ವಚ್ಛತೆಯೂ ಇಲ್ಲ. ಅಲ್ಲದೇ, ಈ ಶೌಚಾಲಯದ ನಿರ್ವಹಣೆ ಮಾಡುವ ಗುತ್ತಿಗೆದಾರ ವಾರದಲ್ಲಿ ಒಂದೆರೆಡು ದಿನ ಕೆಲ ಹೊತ್ತು ಮಾತ್ರ ಬೀಗ ತೆಗೆಯುತ್ತಾರೆ.

ಆತ ಶೌಚಾಲಯದ ಬೀಗ ತೆಗೆದಾಗ ಸಾರ್ವಜನಿಕರು ಹಣ ಪಾವತಿಸಿ ಬಳಸಬೇಕಾದ ಸ್ಥಿತಿ ಇದೆ. ಇದರಿಂದ ಕಾಲೊನಿಯ ಹಿಂದಿರುವ ಹೊಲವನ್ನೇ ಬಹಿರ್ದೆಸೆಗೆ ಅವಲಂಬಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ADVERTISEMENT

‘ಕೆಲವು ದಿನಗಳ ಹಿಂದೆ ಈ ಸ್ಥಳವನ್ನು ಪ್ರಭಾವಿ ವ್ಯಕ್ತಿಗಳು ಕಬಳಿಸಲು ನೋಡಿದಾಗ ಸಾರ್ವಜನಿಕರು ಪ್ರತಿಭಟಿಸಿದ ಕಾರಣ ಶೌಚಾಲಯ ಉಳಿದಿದೆ. ಆದರೆ, ಈ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಯುವತಿಯರು, ಮಕ್ಕಳು, ಕಾಯಿಲೆ ಬಿದ್ದವರು, ವಯಸ್ಸಾದವರು ಶೌಚಕ್ಕೆ ದೂರದ ಬಯಲಿಗೆ ಹೋಗುವುದು ಕಷ್ಟವಾಗಿದೆ. ಬಹಿರ್ದೆಸೆಗೆ ಹೋಗುವುದೇ ಅಸಹ್ಯ ಎನಿಸುವಂತಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಗುರುಸಿದ್ಧಮ್ಮ .

‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಉಪ ಮೇಯರ್‌ ಲಕ್ಷ್ಮೀ ಬಿಜವಾಡ,  ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ  ಗಮನಹರಿಸುತ್ತೇನೆ.  ಶೌಚಾಲಯ ನಿರ್ಮಾಣ  ಕುರಿತು ಈಗಾಗಲೇ  ತಿಳಿಸಲಾಗಿದೆ.  ಮನೆ ಮುಂದೆ ಶೌಚಾಲ ಯ ನಿರ್ಮಿಸಿಕೊಳ್ಳಬಹುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.