ರೋಣ: ‘ಲೋಕಾಯುಕ್ತ ದುರ್ಬಲಗೊಳಿಸಿ ಎಸಿಬಿ ರಚಿಸಿದ ಸಿದ್ದರಾಮಯ್ಯ ವಿರುದ್ಧ ಹಲವು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಬಿಜೆಪಿ ಅಧಿಕಾರಕ್ಕೆ ಬಂದ ಮರುಕ್ಷಣದಲ್ಲಿಯೇ ಎಲ್ಲವನ್ನೂ ತನಿಖೆಗೆ ಒಳಪಡಿಸಿ ತಕ್ಕ ಶಾಸ್ತಿ ಮಾಡಿಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪುನರುಚ್ಚರಿಸಿದರು.
ಕರುನಾಡ ಜಾಗೃತಿ ಯಾತ್ರೆ ಅಂಗವಾಗಿ ಗುರುವಾರ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೆರೆ ಗ್ರಾಮದಲ್ಲಿ ನಡೆದ ಮುಷ್ಟಿ ಧಾನ್ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇದು ರೈತ ವಿರೋಧಿ, ಕೊಲೆಗಡುಕ ಸರ್ಕಾರ. ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಮುಖ್ಯಮಂತ್ರಿ ನಿದ್ರೆ ಮಾಡುತ್ತಿದ್ದಾರೆ. ಬುರುಡೆದಾಸ ಸಿದ್ದರಾಮಯ್ಯಗೆ ನಾನು ಏನೂ ಹೇಳುವುದಿಲ್ಲ. 30 ದಿನ ಸಮಯ ಕೊಡಿ. ಚುನಾವಣಾ ಪ್ರಣಾಳಿಕೆಯಲ್ಲೇ ಎಲ್ಲವನ್ನೂ ಹೇಳುತ್ತೇನೆ. ಮತ್ತೊಮ್ಮೆ ಆಶೀರ್ವಾದ ಮಾಡಿ. ಉತ್ತಮ ಸರ್ಕಾರ ಕೊಡುತ್ತೇನೆ. ಗದಗ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ’ ಎಂದು ಮನವಿ ಮಾಡಿದರು.
‘ಜನ್ಮದಿನದ ಅಂಗವಾಗಿ ಫೆಬ್ರುವರಿ 27ರಂದು ದಾವಣಗೆರೆಯಲ್ಲಿ ನಡೆದ ರೈತ ಸಮಾವೇಶದಲ್ಲಿ ರೈತರ ಮನೆಯಿಂದ ಮುಷ್ಟಿ ಧಾನ್ಯ ಸಂಗ್ರಹಿಸುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ಅಭಿಯಾನ ನಡೆದಿದೆ. ರೈತರ ಬಾಳಲ್ಲಿ ಭರವಸೆಯ ಬೆಳಕು ಮೂಡಿಸಲು ಬಿಜೆಪಿ ಬದ್ಧ’ ಎಂದು ಪ್ರತಿಜ್ಞೆ ಮಾಡಿದ ಪತ್ರವನ್ನು ರೈತರಿಗೆ ತಲುಪಿಸಿ, ಈ ಧಾನ್ಯ ಸಂಗ್ರಹಿಸಲಾಗಿದೆ. ರೈತರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂಬ ಸಂಕಲ್ಪವನ್ನು ಇಂದಿನ ಸಮಾರೋಪ ಸಮಾರಂಭದಲ್ಲಿ ಮಾಡುತ್ತಿದ್ದೇವೆ’ ಎಂದು ಯಡಿಯೂರಪ್ಪ ಹೇಳಿದರು.
**
ಸಿದ್ದರಾಮಯ್ಯ ನಿಂತ ನೆಲ ಕುಸಿಯುತ್ತಿದೆ. ಚಾಮುಂಡೇಶ್ವರಿಯಲ್ಲೇ ಅವರಿಗೆ ನೆಲೆ ಇಲ್ಲ. ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ. ಅವರೂ ಗೆಲ್ಲಲ್ಲ, ಮಗನೂ ಗೆಲ್ಲಲ್ಲ –ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ.
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.