ಗಜೇಂದ್ರಗಡ: ಇಲ್ಲಿನ ಬಸ್ ನಿಲ್ದಾಣ ವಿವಿಧ ಸಮಸ್ಯೆಯ ತಾಣವಾಗಿ, ಪ್ರಯಾಣಿಕರರ ಪಾಲಿಗೆ ನರಕ ಸದೃಶ್ಯವಾಗಿದೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಂಕ್ರೀಟ್ ಹಾಕಲು ₹ 1.33 ಕೋಟಿ ವೆಚ್ಚದ ಕಾಮಗಾರಿಯನ್ನು ಗುತ್ತಿಗೆದಾರರು ಆರಂಭಿಸಿ, ಅರ್ಧಕ್ಕೆ ನಿಲ್ಲಿಸಿದ್ದಾರೆ. ಬಸ್ ನಿಲ್ದಾಣದ ಎದುರಿಗಿರುವ ನೆಲಕ್ಕೆ ಸಿ.ಸಿ ಬೆಡ್ ಹಾಕದ ಕಾರಣ ಅದು ಕೊಳದಂತಾಗಿದ್ದು, ಮಳೆ ನೀರು ಭರ್ತಿಯಾದರೆ ಬಸ್ ನಿಲ್ದಾಣ ಪ್ರವೇಶಿಸಲು ಪ್ರಯಾಣಿಕರಿಗೆ ಕಠಿಣವಾಗುತ್ತದೆ.
ಪಟ್ಟಣದ ಕಾಲಕಾಲೇಶ್ವರ ವೃತ್ತದಿಂದ ಟಿ.ಟಿ.ಡಿ ಕಲ್ಯಾಣ ಮಂಟಪದವರೆಗಿನ ಜೋಡು ರಸ್ತೆಯನ್ನು ನಗರೋತ್ಥಾನ ಯೋಜನೆ ಅಡಿ ಸಿ.ಸಿ ರಸ್ತೆ ನಿರ್ಮಾಣಕ್ಕಾಗಿ ಅಗಿಯಲಾಗಿದೆ. ರಸ್ತೆ ಅಗೆದ ಮಣ್ಣನ್ನು ಬಸ್ ನಿಲ್ದಾಣದ ಒಂದು
ಬದಿಯ ದ್ವಾರದಲ್ಲಿ ಹಾಕಿರುವುರಿಂದ ಬಸ್ಗಳು ಒಂದೇ ದ್ವಾರದಿಂದ ಸಂಚರಿಸುತ್ತಿವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಕಾಮಗಾರಿಗಳನ್ನು ಪೂರ್ತಿ ಮುಗಿಸುವಂತೆ ಬಸ್ ಡಿಪೊ ಅಧಿಕಾರಿಗಳು ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇತ್ತ ರಸ್ತೆ ಕಾಮಗಾರಿ, ಅತ್ತ ಅರ್ಧಕ್ಕೆ ನಿಂತ ಕಾಂಕ್ರೀಟ್ ಕಾಮಗಾರಿ ಇದರಿಂದ ಉಂಟಾಗುವ ದೂಳಿನಿಂದ ಜನರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
‘ಬಸ್ ನಿಲ್ದಾಣದ ಆವರಣದ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಈಗಾಗಲೇ ಎರಡು ನೋಟಿಸ್ ನೀಡಲಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ’ ಎಂದು ಗಜೇಂದ್ರಗಡ ಡಿಪೊ ಸಹಾಯಕ ಎಂಜಿನಿಯರ್ ಎಂ.ಎಲ್.ಇಂಗಳಹಳ್ಳಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.