ADVERTISEMENT

ದಾಹ ತಣಿಸಲು ಅರವಟಿಗೆ ತೆರೆದು. ..

ಜೋಮನ್ ವರ್ಗಿಸ್
Published 24 ಏಪ್ರಿಲ್ 2017, 5:28 IST
Last Updated 24 ಏಪ್ರಿಲ್ 2017, 5:28 IST

ಗದಗ: ಕಳೆದೆರಡು ವಾರಗಳಿಂದ ನಗ ರದ ಜನತೆ ಬಿಸಿಲಿನ ಉಗ್ರ ಸ್ವರೂಪ ದಿಂದ ತತ್ತರಿಸಿ ಹೋಗಿದ್ದಾರೆ. ಈ ಬಾರಿಯ ಉಷ್ಣಾಂಶವು, ಅಂದರೆ 75 ವರ್ಷಗಳ ಹಿಂದೆ ಏಪ್ರಿಲ್‌ ತಿಂಗಳಲ್ಲಿ ದಾಖ ಲಾಗಿದ್ದ ಸಾರ್ವಕಾಲಿಕ ದಾಖಲೆಯನ್ನು (41.1 ಡಿಗ್ರಿ ಸೆ.) ಸಮೀಪಿಸುತ್ತಿದೆ. ಈಗಾಗಲೇ ನಗರದ ಉಷ್ಣಾಂಶ  40 ಡಿಗ್ರಿ ಸೆ. ದಾಟಿದೆ. ಮುಂಜಾನೆಯಿಂದ ಪ್ರಖರ ಬಿಸಿಲು. ಉಷ್ಣಾಂಶದಲ್ಲಿ ಆದ ಹೆಚ್ಚಳದಿಂದ ಧಗೆ ಹೆಚ್ಚಾಗಿದೆ. ಬಿಸಿಗಾಳಿ ಬೀಸುತ್ತಿರುವುದರಿಂದ ಸ್ಥಳೀಯರು ಬಿಸಿಲ ಬೇಗೆಗೆ ಬಿಚ್ಚಿ ಬಿದ್ದಿದ್ದಾರೆ. ಕುಡಿವ ನೀರಿನ ಹಾಹಾಕಾರವೂ ಹೆಚ್ಚಿದೆ.

ಹವಾಮಾನ ಇಲಾಖೆ ಅಂಕಿ ಅಂಶ ಪ್ರಕಾರ, ಕಳೆದ ಹತ್ತು ವರ್ಷದ ಬೇಸಿಗೆಗೆ ಹೋಲಿಸಿದರೆ ಈ ಬಾರಿ 4 ಡಿಗ್ರಿ ಸೆ. ಉಷ್ಣಾಂಶ ಹೆಚ್ಚಾಗಿದೆ. ಮಧ್ಯಾಹ್ನದ ವೇಳೆಗೆ ತಾಳಲಾರದಷ್ಟು ಝಳ ಉಂಟಾ ಗುತ್ತಿದೆ. ರಾತ್ರಿಯೂ ಬಿಸಿ ಗಾಳಿಯನ್ನೇ ಉಸಿರಾಡುವಂತಾಗಿದ್ದು, ಭೂಮಿ ಕಾದ ಹಂಚಿನಂತಾಗಿದೆ. ಇದರ ನಡುವೆ ವಿದ್ಯುತ್‌ ಕಡಿತ ಜನರ ಬೇಗೆ ಹೆಚ್ಚಿಸಿದೆ. ಜನರು ಮಧ್ಯಾಹ್ನದ ವೇಳೆ ಹೊರಗೆ ಬರಲು ಹೆದರುತ್ತಿದ್ದಾರೆ. ತಣ್ಣೀರಿನ ನಲ್ಲಿ ತಿರುಗಿಸಿದರೆ ಬಿಸಿ ನೀರು ಬರುತ್ತಿದೆ.

ತಂಪು ಪಾನೀಯ ಅಂಗಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿದೆ. ಎಳನೀರು ಹಾಗೂ ಹಣ್ಣಿನ ರಸಗಳ ಬೇಡಿಕೆ ಹೆಚ್ಚಾಗಿದ್ದು, ಉತ್ತರ ಪ್ರದೇಶದಿಂದ ಬಂದಿರುವ ಜ್ಯೂಸ್‌ವಾಲಗಳು ನಗರದ ಅಲ್ಲಲ್ಲಿ ತಳ್ಳುವ ಗಾಡಿಗಳಲ್ಲಿ ಮೂಸಂಬಿ  ರಸ ಮಾರಾಟ ಮಾಡುತ್ತಿದ್ದಾರೆ. ಎಳ ನೀರಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ನಗರದಲ್ಲಿ ₹ 20 ಇದ್ದ ಎಳನೀರು ಈಗ ₹ 25ರಿಂದ ₹ 30ಕ್ಕೆ ಏರಿಕೆಯಾಗಿದೆ.

ADVERTISEMENT

ನೀರಡಿಕೆ ನೀಗಿಸುವ ಅರವಟಿಗೆ ಗದಗ–ಬೆಟಗೇರಿ ಅವಳಿ ನಗರದಲ್ಲಿ ಮೊದಲೇ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಇದೆ. ಇದರ ನಡುವೆ ಗ್ರಾಮೀಣ ಭಾಗಗಳಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ರೈತರು, ಕೂಲಿಕಾರ್ಮಿಕರು ಶುದ್ಧ ಕುಡಿಯುವ ನೀರಿಗಾಗಿ ಪರದಾ ಡುವಂತಾಗಿದ್ದು, ನಗರದ ಹಲವೆಡೆ ಪ್ರಾರಂಭವಾಗಿರುವ ಅರವಟಿಗೆಗಳೇ ಇವರ ದಾಹ ನೀಗಿಸುತ್ತಿವೆ. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ವಿವಿಧ ಸಂಘ ಟನೆಗಳ ವತಿಯಿಂದ ಬೇಸಿಗೆ ದಾಹ ನೀಗಿಸಲು ಅರವಟಿಗೆಗಳನ್ನು ಸ್ಥಾಪಿಸಲಾ ಗಿದೆ.

ಈ ಸಂಘಟನೆಗಳ ಕಾರ್ಯಕರ್ತರು ನಿತ್ಯವು ಅರವಟಿಗೆಗಳಿಗೆ ನೀರು ತುಂಬು ತ್ತಾರೆ. ಕೆಲವೆಡೆ ಮಣ್ಣಿನ ಮಡಕೆ, ಇನ್ನೂ ಕೆಲವೆಡೆ ನೀರಿನ ಕ್ಯಾನ್‌ಗಳನ್ನು ಇಡಲಾ ಗಿದೆ. ಅವುಗಳಿಗೆ ಗೋಣಿ ಚೀಲ ಸುತ್ತಿ, ನೀರು ಚಿಮುಕಿಸಿ, ಪಾತ್ರೆಯೊಳಗಿರುವ ನೀರು ಸದಾ ತಂಪಾಗಿರಲು ವ್ಯವಸ್ಥೆ ಮಾಡಲಾಗಿದೆ. ದಾರಿಹೋಕರು, ಅನ್ಯ ಕೆಲಸದ ನಿಮಿತ್ತ ನಗರಕ್ಕೆ ಬಂದವರು, ಅಲ್ಲಲ್ಲಿ ಸ್ಥಾಪಿಸಿರುವ ಅರವಟಿಗೆ ನೀರು ಕುಡಿದು, ಅರವಟಿಗೆ ಸ್ಥಾಪಿಸಿದವರ ಹೊಟ್ಟೆ ತಣ್ಣಗಿರಲಿ ಎಂದು ಹಾರೈಸಿ ಮುಂದೆ ಸಾಗುತ್ತಾರೆ.

ನಗರಸಭೆಯ ಮುಂಭಾಗ, ಗಾಂಧಿ ವೃತ್ತ, ಸರಾಫ್ ಬಜಾರ್, ಜನತಾ ಬಜಾರ್, ಹಳೆ ಜಿಲ್ಲಾಧಿಕಾರಿ ಕಚೇರಿ, ಬಸವೇಶ್ವರ ವೃತ್ತ, ಕೆ.ಸಿ. ರಾಣಿ ರಸ್ತೆ, ಬ್ಯಾಂಕ್ ರಸ್ತೆ, ಬನ್ನಿ ಮಹಾಂಕಾಳಿ ದೇವ ಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸೇರಿ ನಗರದ ವಿವಿಧೆಡೆ 20ಕ್ಕೂ ಹೆಚ್ಚು ಅರವಟಿಗೆಗಳನ್ನು ಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.