ADVERTISEMENT

‘ನಕಾರಾತ್ಮಕ ಚಿಂತನೆ ಶಿಕ್ಷಕರಿಗೆ ಸಲ್ಲ’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:27 IST
Last Updated 11 ನವೆಂಬರ್ 2017, 6:27 IST

ಲಕ್ಷ್ಮೇಶ್ವರ: ‘ಮಕ್ಕಳ ಹೃದಯದಲ್ಲಿ ಅರಿವಿನ ಹಣತೆ ಬೆಳಗುವ ಶಿಕ್ಷಕರು ಎಂದಿಗೂ ನಕಾರಾತ್ಮಕವಾಗಿ ಚಿಂತಿಸಬಾರದು. ಇಡೀ ದೇಶವೇ ಶಿಕ್ಷಕರ ಮೇಲೆ ಅವಲಂಬಿತವಾಗಿದೆ. ಉತ್ತಮ ಶಿಕ್ಷಕರು ಮಾತ್ರ ಉತ್ತಮ ನಾಗರಿಕರನ್ನು ತಯಾರು ಮಾಡಬಲ್ಲರು’ ಎಂದು ಕೋಲ್ಕತ್ತದ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಸ್ವಾಮಿ ಆತ್ಮ ಪ್ರಿಯಾನಂದಜಿ ಮಹಾರಾಜ ಅಭಿಪ್ರಾಯಪಟ್ಟರು.

ಶುಕ್ರವಾರ ಇಲ್ಲಿ ನಡೆದ ವಿವೇಕಪಥ ಕಾರ್ಯಕ್ರಮದಲ್ಲಿ ಅವರು, ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದರು. ‘ಶಿಕ್ಷಕರು ತಮ್ಮ ಜ್ಞಾನವನ್ನು ಮಕ್ಕಳ ಎದುರು ಅನಾವರಣ ಮಾಡಬೇಕು. ಮುಚ್ಚಿಟ್ಟ ಜ್ಞಾನ ಯಾರಿಗೂ ಉಪಯೋಗವಿಲ್ಲ. ಆದರೆ, ಅದನ್ನು ಹಂಚಿದಾಗ ಸಾವಿರಾರು ಜನರಿಗೆ ಅನುಕೂಲ ಆಗುತ್ತದೆ’ ಎಂದರು.

‘ಯಾವ ವ್ಯಕ್ತಿಯೂ ದುರ್ಬಲನಲ್ಲ. ಪ್ರತಿಯೊಬ್ಬರಲ್ಲಿ ಅನಂತ ಶಕ್ತಿ ಅಡಗಿರುತ್ತದೆ. ಅದನ್ನು ಅಂತರ್‌ ಜ್ಞಾನದಿಂದ ತಿಳಿದುಕೊಳ್ಳಬೇಕು ಎಂದು ವಿವೇಕಾನಂದರು ಹೇಳಿದ್ದಾರೆ. ಒಳ್ಳೆ ಕೆಲಸಗಳನ್ನು ಮಾಡಲು ಸದಾ ಮುಂದೆ ಬರಬೇಕು’ ಎಂದು ಗದಗ ರಾಮಕೃಷ್ಣ ಮಠದ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ADVERTISEMENT

ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ಜಿ.ಎಸ್‌.ಗಡ್ಡದೇವರಮಠ ಮಾತನಾಡಿದರು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಶಿವಪೂರ್ಣಾನಂದಜೀ ಮಹಾರಾಜ, ಮಾಜಿ ಶಾಸಕ ಡಿ.ಆರ್‌. ಪಾಟೀಲ, ಪುರಸಭೆ ಅಧ್ಯಕ್ಷ ರಾಜಣ್ಣ ಕುಂಬಿ, ಜೆ.ಕೆ.ಜಾಮದಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್‌.ಪಿ. ಬಳಿಗಾರ ಇದ್ದರು. ಸೋಮಣ್ಣ ಮುಳಗುಂದ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.