ರೋಣ: ಮಹದಾಯಿ ಜಾರಿಗಾಗಿ ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ರೈತ ಸೇನಾ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ರೈತ ಸೇನಾ ತಾಲೂಕು ಅಧ್ಯಕ್ಷ ಮುತ್ತಪ್ಪ ಕುರಿ ಮಾತನಾಡಿ, ‘ಬಿಜೆಪಿ ಸರ್ಕಾರ ಶೀಘ್ರವಾಗಿ ಮಧ್ಯಸ್ಥಿಕೆ ವಹಿಸಿ ಮಹದಾಯಿ ನದಿಯ ಯೋಜನೆಯನ್ನು ಬಗೆಹರಿಸಬೇಕು’ ಎಂದು ಒತ್ತಾಯ ಮಾಡಿದರು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದೇ 15ರೊಳಗೆ ಮಹದಾಯಿ ನದಿ ವ್ಯಾಜ್ಯವನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಪ್ರತಿ
ಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖಂಡ ಗೋವಿಂದಗೌಡ ಪಾಟೀಲ ಮಾತನಾಡಿ, ‘ಗದಗ, ಭಾಗಲಕೋಟಿ, ಧಾರವಾಡ ಸೇರಿದಂತೆ ಮೂವರು ಜಿಲ್ಲೆಗಳ ರೈತರು ಮೂರು ವರ್ಷದಿಂದ ಕುಡಿಯುವ ನೀರಿಗೆ ಹೋರಾಟವನ್ನು ನಡೆಸುತ್ತಿದ್ದಾರೆ.ಆದರೂ ಆಳುವ ಸರ್ಕಾರ ಇದನ್ನು ಮರೆತಿದೆ’ ಎಂದು ಹೇಳಿದರು.
ರುದ್ರಗೌಡ ಪಾಟೀಲ ಮಾತನಾಡಿ, ನಾಲ್ಕು ದಶಕಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಇಲ್ಲಿಂದ ಹಲವರು ರಾಜಕೀಯ ಭವಿಷ್ಯ ಕಂಡುಕೊಂಡಿದ್ದಾರೆ. ಆದರೆ ಒಬ್ಬ ಜನಪ್ರತಿನಿಧಿ ಇದರ ಬಗ್ಗೆ ಗಟ್ಟಿಯಾದ ನಿಲುವು ತಾಳಿ ಹೋರಾಟಕ್ಕೆ ಇಳಿಯುತ್ತಿಲ್ಲ’ ಎಂದು ಅವರು ಆರೋಪಿಸಿದರು.
ಪ್ರಮುಖರಾದ ಭೀಮಪ್ಪ ಕಾರಟಗಿ, ಬಸವರಾಜ ಕುಂಭಾರ, ನಾಗಯ್ಯ ಮಾಳೆವಾಡ, ಮಲ್ಲಪ್ಪ ಬಡಿಗೇರಿ, ಸಿ.ಎಚ್.ಜೈನರ್, ಭೀಮಪ್ಪ ಕಂಬಳಿ, ಭಾರತಿ ಹೂಗಾರ, ರೇಣವ್ವ ಜೈನರ್, ರೇಣವ್ವ ಮುಳ್ಳೂರ ಪ್ರತಿಭಟನೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.