–ರಾಜೇಂದ್ರಗೌಡ ಪಾಟೀಲ
**
ಮುಳಗುಂದ: ಸಮೀಪದ ಸೊರಟೂರ ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಯ ನಿರ್ವಹಣೆ ಕೊರತೆಯಿಂದ ಗ್ರಾಮದಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
13 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸೊರಟೂರ ಗ್ರಾಮದ ಹಲವಾರು ವಾರ್ಡ್ಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಪಂಚಾ ಯ್ತಿಯ ನಿಗದಿತ ಸಮಯಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಬೆಳಿಗ್ಗೆ, ಮಧ್ಯಾಹ್ನ, ಕೆಲವೊಂದು ಬಾರಿ ಸಂಜೆ ಸಮಯದಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಜನರು ತಮ್ಮ ನಿತ್ಯದ ಕೂಲಿ ಕೆಲಸ ಕಾರ್ಯ ಬದಿ ಗೊತ್ತಿ ನೀರಿಗಾಗಿ ದಿನವಿಡಿ ಕಾಯುವ ಕೆಲಸವಾಗಿದೆ.
ನೀರು ಸರಿಯಾಗಿ ಏಕೆ ಬರುತ್ತಿಲ್ಲ ಎಂದು ಸಂಬಂಧಪಟ್ಟ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಮೋಟರ್ ಸುಟ್ಟಿದೆ, ಪೈಪ್ ಲೈನ್ ದುರಸ್ತಿ ಇದೆ ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂದು ಜನರು ಗಂಭೀರವಾಗಿ ಆರೋಪಿ ಸಿದ್ದಾರೆ.
ಎರಡನೇಯ ವಾರ್ಡಿನಲ್ಲಿ ನೀರಿನ ಟ್ಯಾಂಕರ್ ನಿರ್ಮಿಸಿ ಪೈಪ್ಲೈನ್ ಅಳವಡಿಸಿ ಮೂರು ತಿಂಗಳು ಗತಿಸಿ ದರೂ ಇಲ್ಲಿಯವರೆಗೂ ನೀರು ಪೂರೈಕೆ ಯಾಗುತ್ತಿಲ್ಲ. ಎಲ್ಲ ವಾರ್ಡ್ಗಳಲ್ಲಿ ಸಮರ್ಪಕ ನೀರು ಪೂರೈಕೆಯಾಗಿದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸಂಬಂದಪಟ್ಟ ಅಧಿ ಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಸಮರ್ಪಕ ನೀರು ಸರಬರಾಜು ಮಾಡಬೇಕು ಎಂದು ಗಾಮ್ರಸ್ಥರಾದ ವಿಷ್ಣು ಮೀರ ಗಾಣಿ, ಮಹಾಂತೇಶ ಹೊಸಮಠ, ಶಿವನಪ್ಪ ಚಪಾಟಿ, ಜಗದೀಶ ಬೋಳನವರ, ನಾಗಪ್ಪ ಕಣವಿ ,ಮಂಜು ಡಂಬಳ, ಶೇಕಪ್ಪ ಹಳ್ಳಿ, ಸೋಮಣ್ಣ ಹೋಳಗಿ, ನಂದೀಶ ಶೆಟ್ಟರ್, ಗುರುಪಾದಪ್ಪ ಸಂಶಿ, ಶಿಮಣ್ಣ ಚನವೀರಶೆಟ್ಟಿ ಮೊದಲಾದವರು ಆಗ್ರಹಿಸಿದ್ದು, ಸಮಸ್ಯೆಗೆ ಸ್ಪಂದಿಸದಿದ್ದರೆ ನೀರಿಗಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
**
ನೀರಿನ ಅಭಾವ ಇರುವ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪ್ರಕ್ರಿಯೆ ನಡದಿದೆ. ಕೆಲವು ಕೊಳವೆ ಬಾವಿ ದುರಸ್ತಿ ಮಾಡಿಸುತ್ತಿದ್ದೇವೆ.
–ಮಾಲತೇಶ,
ಪಿಡಿಓ, ಸೊರಟೂರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.