ಶಿರಹಟ್ಟಿ: ‘ತಾಲ್ಲೂಕು ವಿಭಜನೆ ಪ್ರಕ್ರಿಯೆ ಯಲ್ಲಿ ಅಧಿಕಾರಿಗಳು ರಾಜಕೀಯ ಪ್ರೇರಿತ ಆಡಳಿತ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದಲ್ಲಿ ಹೋರಾಟ ಉಗ್ರಸ್ವರೂಪ ಪಡೆದು ಕೊಳ್ಳುತ್ತದೆ. ಇದಕ್ಕೆ ಜಿಲ್ಲಾಡಳಿತವೇ ಹೊಣೆ’ ಎಂದು ಕುಂದುಕೊರತೆ ಹೋರಾಟ ಸಮಿತಿ ಅಧ್ಯಕ್ಷ ಸಿದ್ರಾಮಯ್ಯ ಹಾವೇರಿಮಠ ಹಾಗೂ ಸದಸ್ಯ ನಜೀರ್ ಡಂಬಳ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಾರ್ಯಾ ಲಯದಲ್ಲಿ ಕುಂದು ಕೊರತೆ ನಿವಾರಣಾ ಸಮಿತಿ ಸದಸ್ಯರು ಹಾಗೂ ಸಾರ್ವಜನಿ ಕರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಅವರು ಮಾತನಾಡಿದರು.
‘ಮಾಜಿ ಶಾಸಕರು ಹಾಗೂ ರಾಜಕೀಯ ಮುಖಂಡರ ಪ್ರಭಾವಕ್ಕೆ ಒಳಗಾದ ಜಿಲ್ಲಾ ಆಡಳಿತದ ಕೆಲ ಸಿಬ್ಬಂದಿ ನಿರ್ದಿಷ್ಟ ವ್ಯಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇದರಿಂದ ಆಡಳಿತ ಯಂತ್ರ ವೈಫಲ್ಯ ಕಂಡಿದೆ. ತಪ್ಪಿತಸ್ಥರ ವಿರುದ್ದ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅಕ್ಬರ ಯಾದಗಿರಿ ಆಗ್ರಹಿಸಿದ್ದಾರೆ.
‘ಭೌಗೋಳಿಕ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮಾಗಡಿ, ಯಳವತ್ತಿ, ಮಾಡಳ್ಳಿ ಗ್ರಾಮಗಳು ಶಿರಹಟ್ಟಿ ತಾಲ್ಲೂಕಿಗೆ ಸೇರ್ಪಡೆಯಾಗಬೇಕು. ಈ ಕುರಿತು ಮಾಗಡಿ ಮತ್ತು ಯಳವತ್ತಿ ಗ್ರಾಮ ಪಂಚಾಯ್ತಿಯಲ್ಲಿ ಠರಾವು ಪಾಸು ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾಗಿದೆ. ವಿಷಾದಕರ ಸಂಗತಿ ಎಂದರೆ ಮಾಹಿತಿ ಹಕ್ಕಿನಲ್ಲಿ ಈ ಕುರಿತು ವಿವರಣೆ ಕೇಳಿದರೆ ನ್ಯಾಯಾಲಯಕ್ಕೆ ಹೋಗಿ ಎಂಬ ಉತ್ತರ ನೀಡುತ್ತಾರೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬುಡನಶಾ ಮಕಂದರ, ಸದಸ್ಯರಾದ ಸಿ.ಕೆ. ಮುಳಗುಂದ, ಎಚ್ಡಿ. ಮಾಗಡಿ, ಮಾಬುಸಾಬ ಮುಳಗುಂದ, ನಾಗರಾಜ ಲಕ್ಕುಂಡಿ, ವೈ.ಎಸ್. ಪಾಟೀಲ, ಎನ್. ಆರ್. ಕುಲಕರ್ಣಿ, ಚಂದ್ರಕಾಂತ ನೂರ ಶೆಟ್ಟರ ಪರಮೇಶ ಪರಬ, ಶ್ರೀನಿವಾಸ ಬಾರ್ಬರ, ಸಂಜು ಹೆಸರಡ್ಡಿ, ಮುನ್ನಾ ಡಾಲಾಯತ, ಮಹಾಂತೇಶ ದಶಮನಿ, ಮಂಜುನಾಥ ಘಂಟಿ, ಅಬ್ದುಲ್ಹಫಾರ ಕುದರಿ, ಇಂತಿಯಾಜ ಶಿಗ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.