ನರಗುಂದ: ಮಹಾದಾಯಿ ವಿಷಯದಲ್ಲಿ ಪ್ರಮುಖವಾಗಿರುವ ಮೂರು ರಾಜಕೀಯ ಪಕ್ಷಗಳು ತಮ್ಮ ಧೋರಣೆ ತೋರುತ್ತಿವೆ. ಇದನ್ನು ಬಿಟ್ಟು ರೈತರ ಹಿತ ಬಯಸಲು ಮುಂದಾಗಬೇಕೆಂದು ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಆಗ್ರಹಿಸಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 641ನೇ ದಿನ ಮಾತನಾಡಿದರು.
ಈ ಭಾಗದ ರೈತರು ಸುದೀರ್ಘ ಹೋರಾಟ ಮುಂದುವರೆಸಿದ್ದಾರೆ. ಹೋರಾಟವನ್ನು ಅರಿಯದ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ರಾಜಕೀಯಕ್ಕೆ ಮಹಾದಾಯಿ ಯೋಜನೆಯನ್ನು ಬಲಿಪಶು ಕೊಡುವ ಲಕ್ಷಣಗಳು ತೋರುತ್ತಿವೆ. ಇದಕ್ಕೆ ಉತ್ತರ ಕರ್ನಾಟಕದ ರೈತರ ಸಹನೆ ಕಟ್ಟೆ ಒಡೆಯುತ್ತಿದೆ. ಈಗಾಗಲೇ ಎಲ್ಲ ರೀತಿಯ ಹೋರಾಟ ನಡೆದಿದೆ. ಕಾವೇರಿಗಿರುವ ಆಸಕ್ತಿ ಮಹಾದಾಯಿಗೆ ತೋರುತ್ತಿಲ್ಲ. ಎಲ್ಲರೂ ಒಂದೊಂದು ರೀತಿಯಲ್ಲಿ ತಮ್ಮ ವರಸೆ ಬದಲಿಸುತ್ತಿದ್ದಾರೆ. ಯಾವ ಪಕ್ಷಕ್ಕೂ ಮಹಾದಾಯಿ ಆಗುವುದು ಬೇಕಿಲ್ಲ. ಮಹಾದಾಯಿ ನೀರು ಹರಿಯುವವರೆಗೂ ಹೋರಾಟದಿಂದ ಕದಲುವುದಿಲ್ಲ. ಈಗ ಸಕಾಲ ಬಂದಿದೆ. ರೈತರ ಸಂಕಷ್ಟ ದೂರ ಮಾಡಿ ಮಹಾದಾಯಿ ಅನುಷ್ಠಾನಗೊಳಿಸಿ ಎಂದರು.
ರಾಘವೇಂದ್ರ ಗುಜಮಾಗಡಿ ಮಾತನಾಡಿ ಮೂರು ರಾಜ್ಯದ ಸಿಎಂಗಳು ಸೌಹಾರ್ದಯುತ ಮಾತುಕತೆಗೆ ಮುಂದಾಗಬೇಕು. ಗೋವಾದಲ್ಲಿ ನೂತನ ಸರ್ಕಾರ ಬಂದಿದೆ, ಮಹಾದಾಯಿ ಬಗ್ಗೆ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.ಚಂದ್ರಗೌಡ ಪಾಟೀಲ, ಎಸ್.ಬಿ. ಜೋಗಣ್ಣವರ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರ, ಯಲ್ಲಪ್ಪ ಗುಡದರಿ, ಜಗನ್ನಾಥ ಮುಧೋಳೆ, ಸೋಮಲಿಂಗಪ್ಪ ಆಯಟ್ಟಿ, ಕಲ್ಲಪ್ಪ ಮೊರಬದ, ಲಕ್ಷ್ಮಣ ಮುನೇನಕೊಪ್ಪ, ಮಲ್ಲೇಶಪ್ಪ ಬಾಳಿಕಾಯಿ, ರತ್ನವ್ವ ಸವಳಬಾವಿ,ಗಂಗಮ್ಮ ಹಡಪದ, ಸಾವಕ್ಕ ಪಾರ್ವತಿಯವರ, ಮಂಜುಳಾ ನಾಯ್ಕರ, ರಾಯವ್ವ ಕಟಗಿ ಮೊದಲಾದವರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.