ಹಾಸನ: ರಾಜ್ಯದ 8 ಅಮೃತ್ ಮಹಲ್ ಕಾವಲ್ ಜಾನುವಾರು ಕೇಂದ್ರಗಳಲ್ಲಿ ಇರುವ ರಾಸುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆ ಇಲ್ಲ ಎಂದು ಪಶು ಸಂಗೋಪನಾ ಸಚಿವ ಎ. ಮಂಜು ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಮಂಜು ಉತ್ತರ ನೀಡಿದ್ದಾರೆ.
19ನೇ ಜಾನುವಾರು ತಳಿ ಗಣತಿ ಪ್ರಕಾರ ರಾಜ್ಯದಲ್ಲಿ 22,2417 ಅಮೃತ್ ಮಹಲ್ ರಾಸುಗಳಿವೆ. ರಾಜ್ಯದಲ್ಲಿ 8 ಅಮೃತ್ ಮಹಲ್ ಉಪ ಕೇಂದ್ರಗಳಲ್ಲಿ ಒಟ್ಟು 2192 ರಾಸುಗಳಿವೆ. ಅಜ್ಜಂಪುರದಲ್ಲಿ 227 ರಾಸುಗಳಿದ್ದು, 20 ಟನ್ ಒಣ ಮೇವು ಮತ್ತು 96 ಟನ್ ಹಸಿರು ಮೇವು ಲಭ್ಯವಿದೆ. ಬಾಸೂರು ಕೇಂದ್ರದಲ್ಲಿ 214 ರಾಸುಗಳಿದ್ದು, 20.78 ಟನ್ ಒಣ ಮೇವು ಇದೆ.
ರಾಮಗಿರಿಯಲ್ಲಿ 198 ರಾಸುಗಳಿದ್ದು, 45 ಟನ್ ಮೇವು ದಾಸ್ತಾನಿದೆ. ಚಿಕ್ಕ ಎಮ್ಮಿಗನೂರಿನಲ್ಲಿ 272 ರಾಸುಗಳಿದ್ದು, 18 ಟನ್ ಮೇವು ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ರೀತಿ ಲಿಂಗದಹಳ್ಳಿ ಉಪ ಕೇಂದ್ರದಲ್ಲಿ 318 ಅಮೃತ್ ಮಹಲ್ ರಾಸುಗಳು ಇದ್ದು, 9.738 ಟನ್ ಮೇವು ದಾಸ್ತಾನಿದೆ. ಅಲ್ಲದೆ, 32 ಟನ್ನಷ್ಟು ಹಸಿರು ಮೇವು ಲಭ್ಯವಿದೆ. ಹಬ್ಬನಘಟ್ಟದಲ್ಲಿ 340 ರಾಸುಗಳಿದ್ದು, 14.73 ಮೇವು ದಾಸ್ತಾನು ಇದೆ. ಬೀರೂರಿನಲ್ಲಿ 120 ರಾಸುಗಳಿದ್ದು, 16.05 ಮೇವು ದಾಸ್ತಾನು ಇದೆ. ಅಂದಾಜು 90 ಟನ್ ಹಸಿರು ಮೇವು ಲಭ್ಯವಿದೆ ಎಂದು ಸಚಿವರು ಮಾಹಿತಿ ನೀಡಿದರು.
ಚನ್ನರಾಯಪಟ್ಟಣ ತಾಲ್ಲೂಕಿನ ನುಗೇಹಳ್ಳಿ ಹತ್ತಿರದ ರಾಯಸಂದ್ರ ಕಾವಲಿನಲ್ಲಿ 203 ರಾಸುಗಳಿದ್ದು, ಕೊಳವೆಬಾವಿಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಲಿ 8 ಟನ್ ಮೇವು ದಾಸ್ತಾನು ಇದ್ದು, ಮೇವಿನ ವ್ಯವಸ್ಥೆಗೆ ಬೇಡಿಕೆಗನುಗಣುವಾಗಿ ಮೇವನ್ನು ಖರೀದಿ ಮಾಡಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಅಮೃತ್ ಮಹಲ್ ಕಾವಲುಗಳಲ್ಲಿ ಇರುವ ರಾಸುಗಳನ್ನು ಕಾಯಲು ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು. ಉದ್ಯೋಗ ಖಾತ್ರಿ ಯೋಜನೆಗಳಡಿ ನೀರಿನ ಟ್ಯಾಂಕ್ಗಳನ್ನು ನಿರ್ಮಿಸಿ ದನಕರುಗಳಿಗೆ ನೀರು ಪೂರೈಸಬೇಕು ಎಂದು ಗೋಪಾಲಸ್ವಾಮಿ ಮನವಿ ಮಾಡಿದರು.
*
ಅಮೃತ್ ಮಹಲ್ ಕಾವಲುಗಳಲ್ಲಿ ರಾಸುಗಳನ್ನು ಕಾಯಲು ಹೆಚ್ಚಿನ ಕಾರ್ಮಿಕರನ್ನು ನೇಮಕ ಮಾಡಲಾಗುವುದು.
-ಎ.ಮಂಜು,
ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.