ADVERTISEMENT

ಒಗ್ಗಟ್ಟು ಪ್ರದರ್ಶಿಸಲು ಬ್ರಾಹ್ಮಣರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 9:26 IST
Last Updated 26 ಸೆಪ್ಟೆಂಬರ್ 2016, 9:26 IST

ಹಾಸನ:  ಸಮಾಜ ಬಾಂಧವರು ಒಗ್ಗಟ್ಟು ಪ್ರದರ್ಶನ ಮಾಡಲು ಮುಂದಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಕ್ತಾರ ಎಚ್.ಎನ್. ಹಿರಿಯಣ್ಣಸ್ವಾಮಿ  ಹೇಳಿದರು.

ನಗರದ ಸೀತಾರಾಮಾಂಜನೇಯ ದೇವಾಲಯ ಆವರಣದಲ್ಲಿ ಹೊಯ್ಸಳ ಕರ್ನಾಟಕ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ 14ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 9ನೇ ಸಮ್ಮೇಳನವನ್ನು ಈ ಬಾರಿ ಬೆಳಗಾವಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಸಮ್ಮೇಳನಕ್ಕೆ ₹ 3 ಕೋಟಿ ಖರ್ಚು ಅಂದಾಜಿಸಲಾಗಿದೆ.  ಪ್ರತಿನಿಧಿ ಶುಲ್ಕ ₹ 100ರಿಂದ 500 ವಿಧಿಸಲಾಗುವುದು. ಸಮ್ಮೇಳನಕ್ಕಾಗಿ ಜನಜಾಗೃತಿ ಕಾರ್ಯಕ್ರಮವನ್ನು ಮಹಾಸಭಾ ಮಾಡಲಿದೆ ಎಂದರು.

ಮಹಾಸಭಾ ವತಿಯಿಂದ ಅನೇಕ ಜನಪರ ಕಾರ್ಯಕ್ರಮ ಮಾಡಲಾಗಿದೆ.  ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಂಘದ ಹಿರಿಯ ಸದಸ್ಯ ದಂಪತಿಗಳಾದ ಬಾಣಾವರದ ಬಿ.ಸಿ. ಪ್ರಭಾವತಿ ಮತ್ತು ಬಿ.ವಿ. ಚಂದ್ರಶೇಖರ್ ಹಾಗೂ ಬೆಂಗಳೂರಿನ ಎಚ್.ಎಸ್. ನಾಗರತ್ನ ಮತ್ತು ಎಚ್.ಎಸ್. ಶ್ರೀಕಂಠಯ್ಯ, ಹಿರಿಯರಾದ ಬಿ.ವಿ. ಸತ್ಯನಾರಾಯಣ, ಪತ್ರಕರ್ತೆ ಲೀಲಾವತಿ,  ಗಮಕಿ  ಗಣೇಶ ಉಡುಪ, ತಾಂತ್ರಿಕ ವಿಭಾಗದ ಸಂಶೋಧಕ ಪ್ರವೀಣ್ ಎಲ್. ಮೂರ್ತಿ ಮತ್ತು ಪ್ರದೀಪ್ ಕಶ್ಯಪ್ ರಾಮಸ್ವಾಮಿ, ತೋ.ಚ. ಅನಂತಸುಬ್ಬರಾವ್, ಶ್ರೀನಿಧಿ ಹಾಗೂ ನಗರಸಭೆ ಸದಸ್ಯ ಎಚ್.ಪಿ. ಶ್ರೇಯಸ್ ಅವರನ್ನು ಸನ್ಮಾನಿಸಲಾಯಿತು.

ಹಂಸ ನಟರಾಜ್ ಹಾಗೂ ತಂಡದವರಿಂದ ಗೀತೋಪದೇಶ ನೃತ್ಯ ರೂಪಕ ಪ್ರದರ್ಶನ ನಡೆಯಿತು. ನಂತರ ಸಂಘದ ಹಿರಿಯ ಸದಸ್ಯರು ಹೊಯ್ಸಳ ಕರ್ನಾಟಕ ಬಂಧುಗಳ ಪರಂಪರೆ ಕುರಿತು ವಿಚಾರ ತಿಳಿಸಿದರು.

ಮಹಾಸಭಾದ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ,  ಸಿ.ಎಸ್. ಕೃಷ್ಣಕುಮಾರ್, ವಿದ್ಯಾರಣ್ಯ ಪ್ರತಿಷ್ಠಾನ ಅಧ್ಯಕ್ಷ ಎಂ.ವಿ. ಸತ್ಯನಾರಾಯಣ, ಹೊಯ್ಸಳ ಕನಾಟಕ ಸಂಘದ ಅಧ್ಯಕ್ಷ ಡಿ.ಎನ್. ವೆಂಕಟೇಶಮೂರ್ತಿ, ಅನಂತಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.