ಸಕಲೇಶಪುರ: ಶುಕ್ರವಾರ ಮತ್ತು ಶನಿವಾರ ಕಾಡಾನೆಗಳ ದಾಳಿಯಿಂದಾಗಿ ತಾಲ್ಲೂಕಿನ ಈಚಲಪುರ, ಮಳಲಿ ಹಾಗೂ ದೊಡ್ಡಸತ್ತಿಗಾಲ ಗ್ರಾಮಗಳಲ್ಲಿ ಕೊಯ್ಲು ಮಾಡಿ ಗುಡ್ಡೆ ಮಾಡಿದ್ದ ಭತ್ತದ ಪೈರು, ಒಕ್ಕಣೆ ಮಾಡಿ ಮೂಟೆ ಕಟ್ಟಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತ ನಾಶವಾಗಿವೆ.
ಮಳಲಿ ಗ್ರಾಮದ ಧರ್ಮೇಗೌಡ ಅವರು ಭತ್ತದ ಬೆಳೆ ಕೊಯ್ಲು ಮಾಡಿ ಕಣದಲ್ಲಿ ಗುಡ್ಡೆ ಮಾಡಿದ್ದರು. ರಾತ್ರಿ ಕಾಡಾನೆಗಳು ನುಗ್ಗಿ ಈ ಬೆಳೆಯನ್ನು ಚೆಲ್ಲಾಡಿ, ಹಾಳು ಮಾಡಿವೆ. ಸತ್ತಿಗಾಲ್ ಗ್ರಾಮದಲ್ಲಿ ಮಹಮ್ಮದ್ ಅಬ್ಬಾಸ್, ಅಬ್ದುಲ್ ಮಜೀದ್ ಇವರು ಒಕ್ಕಣೆ ಮಾಡಿ ಚೀಲದಲ್ಲಿ ತುಂಬಿಸಿ ದಾಸ್ತಾನು ಮಾಡಿದ್ದ ಸುಮಾರು 4 ಚೀಲ ಭತ್ತವನ್ನು ತಿಂದು ಸುತ್ತಲೂ ಎರಚಿ ಭಾರಿ ನಷ್ಟ ಉಂಟು ಮಾಡಿವೆ. ಇದೇ ಗ್ರಾಮದ ರವಿ ಅವರ ತೋಟದಲ್ಲಿ ಅಡಿಕೆ, ಕಾಫಿ ಗಿಡಗಳನ್ನು ನಾಶ ಮಾಡಿವೆ.
ಕೃಷ್ಣ ಎಂಬವರ ಭತ್ತದ ಬೆಳೆಯನ್ನು ತುಳಿದು ಹಾಳು ಮಾಡಿವೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈಚಲಪುರ ಗ್ರಾಮದ ಬೋಗರಾಜಾಚಾರ್ ಅವರ ಕಾಫಿ ತೋಟಕ್ಕೆ ನುಗ್ಗಿರುವ ಆನೆಗಳು ತೋಟದ ಎದುರಿನ ಗೇಟ್ ಅನ್ನು ಸಂಪೂರ್ಣ ಮುರಿದು ಹಾಕಿವೆ. 20ಕ್ಕೂ ಹೆಚ್ಚು ಅಡಿಕೆ ಮರಗಳು, ತೆಂಗು, ಕಾಫಿ ಗಿಡಗಳನ್ನು ನಾಶ ಮಾಡಿ ಭಾರಿ ನಷ್ಟ ಉಂಟುಮಾಡಿವೆ. ಸ್ಥಳಕ್ಕೆ ಯಸಳೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.