ADVERTISEMENT

ಕೆರೆಗಳಿಗೆ ನೀರು ತುಂಬಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 7:06 IST
Last Updated 4 ಸೆಪ್ಟೆಂಬರ್ 2017, 7:06 IST

ಹಾಸನ: ನಗರ ವ್ಯಾಪ್ತಿಯ ಕೆರೆಗಳನ್ನು ಪುನಶ್ಚೇತನಗೊಳಿಸಿ ಶೀಘ್ರವೇ ಅವುಗಳಿಗೆ ನೀರು ತುಂಬಿಸಬೇಕು ಎಂದು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಸಿ. ಎಸ್‌. ಕೃಷ್ಣಸ್ವಾಮಿ ಒತ್ತಾಯಿಸಿದರು. ಹಿರಿಯ ನಾಗರಿಕರ ವೇದಿಕೆ ವತಿಯಿಂದ ಬೈಪಾಸ್‌ ರಸ್ತೆಯ ಉದ್ಭವ ಗಣಪತಿ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ನಗರಕ್ಕೆ ಹೊಂದಿಕೊಂಡಂತೆ ಇರುವ 18 ಕೆರೆಗಳಿಗೆ ನೀರು ತುಂಬಿಸಬೇಕು. ಈಗಾಗಲೇ ಜಿಲ್ಲೆಯ ಹಂದಿನ ಕೆರೆ ಮೂಲಕ ನಗರದ ಸತ್ಯಮಂಗಲ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸಿದ್ದರೆ ನಗರದಲ್ಲಿ ಸ್ವಲ್ಪ ಮಟ್ಟಿಗಾದರೂ ನೀರಿನ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ಸಲಹೆ ನೀಡಿದರು.

ವೇದಿಕೆ ಮುಂಖಡ ಬಿ.ಕೆ. ಮಂಜುನಾಥ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಸಿದೆ. ಹವಾಮಾನ ಇಲಾಖೆ ನೀಡಿದ್ದ ವರದಿಗಳು ಸುಳ್ಳಾಗಿವೆ. ಬರ ಮತ್ತಷ್ಟು ಹೆಚ್ಚುವ ಮುನ್ಸೂಚನೆಗಳು ಕಾಣುತ್ತಿವೆ. ಜನತೆ ಪರಿಸರ ಸಂರಕ್ಷಣೆ ಕುರಿತು ಅರಿವು ಬೆಳೆಸಿಕೊಳ್ಳಬೇಕು. ಸಂಘ, ಸಂಸ್ಥೆಗಳು, ವಿದ್ಯಾರ್ಥಿಗಳು ನೀರಿನ ಮೂಲಗಳ ಉಳಿವಿಗೆ ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ರಾಜ್‌ ಕುಮಾರ್‌ ಅಭಿಮಾನಿಗಳ ಬಳಗದ ಗೌರವಾಧ್ಯಕ್ಷ ಬಾಳ್ಳು ಗೋಪಾಲ್‌ ಮಾತನಾಡಿ, ‘ಹೋರಾಟಗಳಿಂದ ಮಾತ್ರ ಎಲ್ಲ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಸಾಧ್ಯ. ಕೆರೆಗಳಿಗೆ ನೀರು ತುಂಬಿಸಲು ಜನಪ್ರತಿನಿಧಿಗಳು ಹಾಗೂ ಸರ್ಕಾರ ನಂಬಿಕೊಳ್ಳಬಾರದು. ಸ್ವಯಂ ಪ್ರೇರಣೆಯಿಂದ ಜಲ ಮೂಲಗಳನ್ನು ರಕ್ಷಿಸಬೇಕು. ಪರಿಸರ ಮತ್ತು ಜೀವ ಜಲದ ರಕ್ಷಣೆಗೆ ಕಂಕಣ ಬದ್ಧರಾಗಿ ಹೋರಾಡಬೇಕು’ ಎಂದು ನುಡಿದರು.

ಸತ್ಯಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್‌ ಮಾತನಾಡಿ, ‘ವಿದ್ಯಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದೆ. ಈ ಸಮಸ್ಯೆಗೆ ತುರ್ತು ಪರಿಹಾರವಿದ್ದು, ಓವರ್‌ ಟ್ಯಾಂಕ್‌ ಮೂಲಕ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾನಗರ, ವಿವೇಕನಗರ ಭಾಗಗಳಿಗೆ ವಾರದಲ್ಲಿ ಮೂರು ದಿನ ನೀರು ಪೂರೈಸಬೇಕು’ ಎಂದು ಒತ್ತಾಯಿಸಿದರು.

ಬಿಗ್‌ಬಾಸ್‌ ಕಾರ್ಯಕ್ರಮ ವಿಜೇತ ಪ್ರಥಮ್, ಕೆರೆಗಳಿಗೆ ನೀರು ತುಂಬಿಸುವ ಸತ್ಕಾರ್ಯಕ್ಕೆ ನಿರಂತರ ವೈಯಕ್ತಿಕ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ಎಚ್‌. ಎಸ್‌. ಅನಿಲ್‌ ಕುಮಾರ್, ವೇದಿಕೆ ಮುಖಂಡ ಜಯಲಕ್ಷ್ಮಿ ನಾರಾಯಣ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.