ADVERTISEMENT

ಕೊಕ್ಕನಘಟ್ಟ: ರಸ್ತೆ ಒತ್ತುವರಿ ತೆರವಿಗೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 10:08 IST
Last Updated 17 ನವೆಂಬರ್ 2017, 10:08 IST

ಹಾಸನ:‘ತಾಲ್ಲೂಕಿನ ಕೊಕ್ಕನಘಟ್ಟ ಮತ್ತು ನಾಗನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹಿಮತ್ ಸಿಂಗ್ ಕಾ ಕಂಪೆನಿ ಒತ್ತುವರಿ ಮಾಡಿದೆ’ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್‌ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಕಾಶೆಯಲ್ಲಿ 30 ಅಡಿ ರಸ್ತೆಯಿದ್ದು, ಆದರೆ ಎರಡು ಅಡಿ ಮಾತ್ರ ರಸ್ತೆ ಬಿಡಲಾಗಿದೆ. ಕೊಕ್ಕನಘಟ್ಟ ಗ್ರಾಮದಲ್ಲಿ ಅಂದಾಜು 400 ಕುಟುಂಬಗಳು ವಾಸ ಮಾಡುತ್ತಿವೆ. ಹಾಸನ–ಮೈಸೂರು ರಸ್ತೆಗೆ ಗ್ರಾಮದಿಂದ ಕೇವಲ 300 ಮೀಟರ್‌ ಅಂತರವಿದೆ. ರಸ್ತೆ ಒತ್ತುವರಿ ಮಾಡಿರುವುದರಿಂದ ಗ್ರಾಮಸ್ಥರು 6 ಕಿ.ಮೀ ಸುತ್ತಿ ಬಳಸಿ ನಗರಕ್ಕೆ ಹಾಗೂ ಹೊಲ,ಗದ್ದೆಗಳಿಗೆ ಬರಬೇಕಾದ ಪರಿಸ್ಥಿಸಿ ನಿರ್ಮಾಣವಾಗಿದೆ ಎಂದು ಹೇಳಿದರು.

‘ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳು ಹಿಮತ್‌ಸಿಂಗ್‌ಕಾ ಕಂಪೆನಿಗೆ ಸಹಕಾರ ನೀಡುತ್ತಾ ಜನರ ಹಿತ ಮರೆತಿದ್ದಾರೆ. ಈಗಾಗಲೇ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಒಂದು ವಾರ ಗಡುವು ನೀಡಲಾಗುವುದು. ಅಷ್ಟರಲ್ಲಿ ರಸ್ತೆ ತೆರವು ಮಾಡದಿದ್ದರೇ ಕೊಕ್ಕನಘಟ್ಟ ಮತ್ತು ನಾಗನಹಳ್ಳಿ ಗ್ರಾಮಸ್ಥರು ಕಂಪೆನಿ ಎದುರು ದನಕರುಗಳನ್ನು ಕಟ್ಟವರು' ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ನಗರ ಘಟಕ ಅಧ್ಯಕ್ಷ ಶೋಭನ್‌ ಬಾಬು ಗೋಷ್ಠಿಯಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.