ADVERTISEMENT

ಗೂಂಡಾಗಳಿಂದ ಗಲಾಟೆ: ಕುಮಾರ್‌ ಆರೋಪ

ಛಲವಾದಿ ಮಹಾಸಭಾ ಭವನದ ಹಣ ದುರ್ಬಳಕೆ ಆಗಿಲ್ಲ: ಅಧ್ಯಕ್ಷರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2016, 5:34 IST
Last Updated 31 ಮೇ 2016, 5:34 IST

ಹಾಸನ: ‘ಛಲವಾದಿ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಕೆ.ಶಿವರಾಮ್‌ ಅವರು ಬಾಡಿಗೆ ಗೂಂಡಾಗಳನ್ನು ಕರೆಯಿಸಿ ವಾರ್ಷಿಕ ಸಭೆಯಲ್ಲಿ ದಾಂದಲೆ ನಡೆಸಿದ್ದಾರೆ’ ಎಂದು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಪಿ.ಕುಮಾರ್‌ ಆರೋಪಿಸಿದರು.

‘ಶಿವರಾಮ್‌ ಅವರ ಅವಧಿಯಲ್ಲಿ ಹಣ ದುರುಪಯೋಗವಾಗಿರುವ ಕುರಿತು ಲೆಕ್ಕದ ವಿವರ ಕೇಳುತ್ತಿದ್ದಂತೆ ಸದಸ್ಯರಲ್ಲದವರು ನನ್ನ ವಿರುದ್ಧ ಘೋಷಣೆ ಕೂಗಿದರು. ಅವರ್‍ಯಾರು ಮಹಾಸಭಾದ ಸದಸ್ಯರಲ್ಲ. ಬೆಂಗಳೂರು, ಮಂಡ್ಯ, ಚಾಮರಾಜನಗರಗಳಿಂದ ಕರೆ ತಂದಿದ್ದ ರೌಡಿಗಳು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಛಲವಾದಿ ಮಹಾಸಭಾ ಭವನ ನಿರ್ಮಿಸಲು ₹ 5ಕೋಟಿ ಅನುದಾನ ನೀಡಿದರು. ಅದರಲ್ಲಿ ₹ 3.5 ಕೋಟಿ ಹಣವನ್ನು ಭೂಸೇನಾ ನಿಗಮಕ್ಕೆ ನೀಡಲಾಗಿದೆ. ಉಳಿದ ಹಣವನ್ನು ಬಿಡುಗಡೆ ಮಾಡದಂತೆ ಶಿವರಾಮ್‌ ಪತ್ರ ಬರೆದು ತಡೆ ಹಿಡಿಸಿದ್ದಾರೆ. ಆದರೆ ಆಗ ನಾನು ಮಹಾಸಭಾದ ಸದಸ್ಯತ್ವವನ್ನೇ ಪಡೆದಿರಲಿಲ್ಲ. ಹೀಗಿರುವಾಗ ಹಣ ದುರ್ಬಳಕೆ ಮಾಡಿಕೊಳ್ಳಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಶಿವರಾಮ್‌ ತಮ್ಮ ಬಾಮೈದ ಉಮೇಶ್‌ ಹೆಸರಿನಲ್ಲಿ ಖಾತೆ ತೆರೆದು ಸಂಘದ  ₹ 79 ಲಕ್ಷ ಹಣ ಇಟ್ಟಿದ್ದರು. ಆ ಹಣದ ಬಗ್ಗೆ ಸದಸ್ಯರು ಪ್ರಶ್ನಿಸಿದಾಗ ಸಮಾವೇಶಕ್ಕೆ ಖರ್ಚಾಗಿರುವುದಾಗಿ ಉತ್ತರಿಸಿದರು. ಆದರೆ ಎಲ್ಲ ಸದಸ್ಯರು ಸ್ವಂತ ಹಣ ಹಾಕಿದ್ದರು. ಊಟದ ಖರ್ಚು ನಾನು ವಹಿಸಿಕೊಂಡಿದ್ದೆ. ಹಣ ದುರುಪಯೋಗ ಮಾಡಿಕೊಂಡಿರುವ ಕುರಿತು ಕೆ.ಶಿವರಾಮ್‌ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ನಕಲಿ ಸಹಿ ಬಳಸಿ ಅಧ್ಯಕ್ಷನಾಗಿದ್ದೇನೆ ಎಂಬ ಆರೋಪವನ್ನು ದಾಖಲೆ ಸಮೇತ ಸಾಬೀತುಪಡಿಸುವಂತೆ’ ಸವಾಲು ಹಾಕಿದರು.

‘ಛಲವಾದಿ ಮಹಾಸಭಾದ ಸಂಸ್ಥಾಪಕರು ಎಂದು ಹೇಳಿಕೊಳ್ಳಲು ಅವರಿಗೆ ಯಾವ ನೈತಿಕತೆಯೂ ಇಲ್ಲ. 1935 ರಲ್ಲಿ ಸ್ಥಾಪಿಸಲಾದ ಸಭಾಕ್ಕೆ ಜಯಪ್ರಕಾಶ್‌ ನಾರಾಯಣ ಸಂಸ್ಥಾಪಕ ಅಧ್ಯಕ್ಷರು ಎಂದು ಸ್ಪಷ್ಟಪಡಿಸಿದ ಕುಮಾರ್‌, ಸಂಘದ ಬೈಲಾ ಪ್ರಕಾರ ಮುಂದಿನ ಎರಡು ವರ್ಷ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ  ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಪುಟ್ಟರಾಜು ಮುಖಂಡರಾದ ಚಂದ್ರಶೇಖರ್, ರಾಘವೇಂದ್ರ, ದಿನೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.