ಮಲೇಬೆನ್ನೂರು: ಸಮೀಪದ ಹರಳಹಳ್ಳಿಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಆಂಜನೇಯಸ್ವಾಮಿ ರಥೋತ್ಸವ ಗುರುವಾರ ಅದ್ಧೂರಿಯಾಗಿ ಬ್ರಾಹ್ಮಿ ಮಹೂರ್ತದಲ್ಲಿ ಜರುಗಿತು.
ಮಂಗಳವಾದ್ಯ, ಡೊಳ್ಳು, ಭಜನೆ, ತಮಟೆ ವಾದನದೊಂದಿಗೆ ಉತ್ಸವ ಮೂರ್ತಿ ರಥಾರೋಹಣವಾಯಿತು. ಬಲಿದಾನ, ರಥ ಪ್ರದಕ್ಷಿಣೆ ನಂತರ ರಥಾರೋಹಣ ನೆರವೇರಿಸಿ ಮಹಾಮಂಗಳಾರತಿ ಮಾಡಿದರು.
ಭಕ್ತ ಸಮೂಹ ತೇರು ಎಳೆದರು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು. ದೇವಾಲಯ ಹಾಗೂ ರಾಜಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಮುಳ್ಳು ಗದ್ದುಗೆ ಉತ್ಸವ: ಸಮೀಪದ ಹರಳಹಳ್ಳಿ ಆಂಜನೇಯ ಸ್ವಾಮಿ ಮುಳ್ಳುಗದ್ದುಗೆ ಉತ್ಸವದಲ್ಲಿ ಗುರುವಾರ ಭಕ್ತರು ಕಾರೆಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು.
ಪೂಜಾವಿಧಿಗಳ ನಂತರ ಭೂತದ ಹಲಗೆ, ಬಾಣ ಹಿಡಿದವರು ಮೊದಲು ಮುಳ್ಳಿನ ಮೇಲೆ ಸಾಗಿಬಂದರು.
ಹರಕೆ ಹೊತ್ತವರು ಒಬ್ಬೊಬ್ಬರಾಗಿ ‘ರಾಮ ರಾಮ ಗೋವಿಂದ’ ಎನ್ನುತ್ತಾ ಮುಳ್ಳಿನ ಮೇಲೆ ಆವೇಶ ಭರಿತರಾಗಿ ನಡೆದು ಬಂದರು.
ಭಕ್ತರು ದೇವಾಲಯದಲ್ಲಿ ಹರಿಸೇವೆ, ಮುಡಿ ಅರ್ಪಣೆ ಹಾಗೂ ಬಾಯಿಬೀಗದ ಹರಕೆ ಸಮರ್ಪಿಸಿದರು.
ಮಕ್ಕಳು, ಹಿರಿಯರು, ಮಹಿಳೆಯರು ವಯೋಮಾನ ಮರೆತು ಉತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಾಲಯ ಹಾಗೂ ರಾಜಬೀದಿಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಿದ್ದರು. ದೇವಾಲಯದ ಸಮಿತಿ ಅನ್ನ ಸಂತರ್ಪಣೆ ಏರ್ಪಡಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.