ಹಿರೀಸಾವೆ: ‘ಕರ್ನಾಟಕ ವಿಕಾಸ ವಾಹಿನಿ’ ಪ್ರವಾಸ ಹಾಸನ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ನಡೆಯಲಿದೆ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಕಿರೀಸಾವೆಯಲ್ಲಿ ಹೇಳಿದರು. ಮಂಗಳವಾರ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಕರ್ನಾಟಕ ವಿಕಾಸ ವಾಹಿನಿ ಪ್ರವಾಸ ಆರಂಭಕ್ಕೆ ಮುನ್ನ ಹರದನಹಳ್ಳಿಯ ಮನೆದೇವರಿಗೆ ಪೂಜೆಸಲ್ಲಿಸಲು ತೆರಳುವ ಮಾರ್ಗದಲ್ಲಿ ಅವರು ಮಾತನಾಡಿದರು.
ಮೊದಲ ಹಂತದಲ್ಲಿ ಉತ್ತರ ಕರ್ನಾಟಕದ 50 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ನಡೆಯಲಿದೆ. ಜನವರಿಯಲ್ಲಿ ಹಾಸನ ಜಿಲ್ಲೆಯಲ್ಲಿ ಸಂಚರಿಸುತ್ತೇನೆ ಎಂದು ತಿಳಿಸಿದರು.
ಕರ್ನಾಟಕ ವಿಕಾಸ ವಾಹಿನಿ ಯಾತ್ರೆಯ ಭಾಗವಾಗಿ ರಾಜ್ಯದ ಎಲ್ಲ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಗ್ರಾಮ ವಾಸ್ತವ್ಯ ಮಾಡಲಿದ್ದು, ಅಗತ್ಯ ಆಧರಿಸಿ ಎರಡು ಅಥವಾ ಮೂರು ಗ್ರಾಮಗಳಲ್ಲಿ ಉಳಿಯುತ್ತೇನೆ ಎಂದು ಹೇಳಿದರು.
ಶಾಸಕ ಬಾಲಕೃಷ್ಣ ಮಾತನಾಡಿ, ಚುನಾವಣೆಗೂ ಮೊದಲು ಕುಮಾರಸ್ವಾಮಿ ಅವರು ಶ್ರವಣಬೆಳಗೊಳ ಕ್ಷೇತ್ರದಲ್ಲಿ ಪ್ರವಾಸ ಮಾಡುವವರು ಎಂದು ಹೇಳಿದರು. ಹಾಸನ ನಗರಸಭೆ ಅಧ್ಯಕ್ಷ ಡಾ.ಅನಿಲ್, ‘ವಿಕಾಸ ವಾಹಿನಿ ಯಾತ್ರೆ ಮಂಗಳವಾರ ಹಾಸನಕ್ಕೆ ಬರಲಿದ್ದು, ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಿದ್ದೇವೆ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಶಶಿಧರ್, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಅಮಾಸೇಗೌಡ, ಗ್ರಾ.ಪಂ ಅಧ್ಯಕ್ಷ ಮಹೇಶ್ ಹಾಗೂ ಇತರ ಮುಖಂಡರು ಇದ್ದರು.
ಪಟಾಕಿ ಸಿಡಿಸಲು ಕಡಿವಾಣ: ರಾಜಕೀಯ ನಾಯಕರು ಬಂದಾಗ ಪಟಾಕಿ, ಸಿಡಿಸಿ, ಮಾಲಾರ್ಪಣೆ ಸಾಮಾನ್ಯ. ಅದರೆ ಸೋಮವಾರ ಕುಮಾರಸ್ವಾಮಿ ಆಗಮಿಸಿದಾಗ ಇವುಗಳಿಗೆ ಕಡಿವಾಣ ಹಾಕಲಾಗಿತ್ತು. ಕುಮಾರಸ್ವಾಮಿ ಅವರ ಆರೋಗ್ಯದ ದೃಷ್ಠಿಯಿಂದ ಪಟಾಕಿ ಸಿಡಿಸದಂತೆ ಹಾಗೂ ಹಾರ ತುರಾಯಿ ಹಾಕದಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.