ಹಾಸನ : ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಜೋರು ಮಳೆ ಸುರಿಯಿತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆ ಸುಮಾರು ಒಂದು ತಾಸು ಗಾಳಿ, ಗುಡಗು ಸಹಿತ ಸುರಿದ ಮಳೆ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ತಂಪೆರೆಯಿತು.
ನಗರದಲ್ಲಿ ಮಧ್ಯಾಹ್ನ ಗುಡುಗು ಸಹಿತ ತುಂತುರು ಮಳೆ ಆರಂಭಗೊಂಡು, ಸಂಜೆ 6 ಗಂಟೆ ಒಂದು ತಾಸು ಉತ್ತಮವಾಗಿ ಬಿದ್ದಿತ್ತು. ನಗರದ ಸಂತ ಫಿಲೋಮಿನಾ ಕಾಲೇಜು ರಸ್ತೆ, ಮಹಾವಿರ ವೃತ್ತ, ಹೇಮಾವತಿ ಪ್ರತಿಮೆ ವೃತ್ತ, ಕಟ್ಟಿನಕೆರೆ ಮಾರುಕಟ್ಟೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ನೀರು ನಿಂತು ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು
ಜಿಲ್ಲೆಯ ಸಕಲೇಶಪುರ, ಆಲೂರು, ಚನ್ನರಾಯಪಟ್ಟಣ, ಹಳೆಬೀಡು, ಬೇಲೂರು, ಶ್ರವಣ ಬೆಳಗೂಳ, ಅರಕಲಗೂಡು, ಕೊಣನೂರಿನಲ್ಲಿ ಒಂದು ಗಂಟೆಗೂ ಹೆಚ್ಚು ಮಳೆ ಸುರಿಯಿತು.
ಅಕಾಲಿಕ ಮಳೆಯಿಂದಾಗಿ ಸಕಲೇಶಪುರ ಭಾಗದಲ್ಲಿ ಕಾಫಿ ಹೂವು ಹಾಗೂ ಮಾವು ಫಸಲಿಗೂ ಹಾನಿಯಾಗುವ ಸಾಧ್ಯತೆ ಇದೆ.
ತಂಪೆರೆದ ಮಳೆ
ಅರಕಲಗೂಡು: ಪಟ್ಟಣ ಹಾಗೂ ಸುತ್ತಮುತ್ತ ಗುರುವಾರ ಸಂಜೆ ವರ್ಷದ ಮೊದಲ ಮಳೆಯ ಸಿಂಚನವಾಯಿತು. ಗುಡುಗು ಸಹಿತ ಧಾರಾಕಾರ ಮಳೆ ಸುಮಾರು ಒಂದುಗಂಟೆಗೂ ಹೆಚ್ಚುಕಾಲ ಸುರಿಯಿತು.
ಕಾದ ಕಾವಲಿಯಂತಾಗಿದ್ದ ಇಳೆಗೆ ತಂಪೆರೆಯಿತು. ಮಳೆಯಿಂದ ಪಟ್ಟಣದಲ್ಲಿ ಮೋರಿಗಳು ತುಂಬಿಹರಿದವಲ್ಲದೆ ರಸ್ತೆಯಲ್ಲೂ ನೀರು ನಿಂತು ಕೆಲಕಾಲ ಸಂಚಾರಕ್ಕೆ ಅಡಚಣೆಯಾಯಿತು. ಬುಧವಾರ ರಾತ್ರಿ ತಾಲೂಕಿನ ಹಲವೆಡೆ ತುಂತುರು ಮಳೆ ಸುರಿದಿತ್ತು.
ಮಳೆಯ ಸಿಂಚನ
ಹೊಳೆನರಸೀಪುರ: ಪಟ್ಟಣ ದಲ್ಲಿ ಗುರುವಾರ ಸಂಜೆ ವರ್ಷದ ಮೊದಲ ಮಳೆಸುರಿಯಿತು. ಸಂಜೆ 4.30 ರ ವೇಳೆಗೆ ಜೋರಾಗಿ ಪ್ರಾರಂಭವಾದ ಮಳೆ 5ಗಂಟೆಯವರೆಗೂ ಸುರಿಯಿತು.
ಬಳಿಕ ತುಂತುರು ತುಂತುರಾಗಿ ರಾತ್ರಿ 7.30ರ ವರೆಗೂ ಸುರಿಯಿತು. ಬಿಸಿಲಿನಿಂದದ ಬಸವಳಿದಿದ್ದ ಇಳೆಗೆ ಮಳೆ ತಂಪೆರೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.