ಹಾಸನ: ಹೊರ ರಾಜ್ಯಗಳಿಂದ ಟೊಮೆಟೊ ಮಾರುಕಟ್ಟೆಗೆ ಆವಕ ಆಗುತ್ತಿರುವ ಪರಿಣಾಮ ಬೆಲೆಯಲ್ಲಿ ಇಳಿಕೆಯಾಗಿದ್ದು, ಕೆ.ಜಿಗೆ ₹ 18 ರಿಂದ ರಿಂದ ₹ 20 ರ ಹಾಸು–ಪಾಸಿನಲ್ಲಿ ಮಾರಾಟ ಮಾಡಲಾಗುತ್ತಿದೆ.
ಕಳೆದ ವಾರ ಕೆ.ಜಿಗೆ ₹ 30 ರಂತೆ ಮಾರಾಟವಾಗುತ್ತಿತ್ತು. 4–5 ದಿನಗಳಿಂದ ವಿವಿಧ ಜಿಲ್ಲೆ ಹಾಗೂ ತೆಲಂಗಾಣ, ಮಹಾರಾಷ್ಟ್ರ ಹಾಗೂ ದಕ್ಷಿಣ ರಾಜ್ಯಗಳಿಂದ ಟೊಮೆಟೊ ಎಪಿಎಂಸಿಗೆ ಹೆಚ್ಚಿಗೆ ಬರುತ್ತಿರುವುದರಿಂದ ಬೆಲೆಯಲ್ಲಿ ಇಳಿಕೆ ಆಗಿದೆ.
‘ಕಳೆದ ವರ್ಷ ಲಾಭದ ಆಸೆಯಿಂದ ರೈತರು ಬೆಳೆದಿದ್ದ ಸಾಕಷ್ಟು ಟೊಮೆಟೊ ಖರೀದಿಸುವವರು ಇಲ್ಲದೆ ಹೊಲ, ಗದ್ದೆಗಳಲ್ಲಿ ಕೀಳದೆ ಬಿಟ್ಟಿದ್ದರು. ಹಲವು ರೈತರು ಬೆಲೆ ಕುಸಿತದಿಂದ ಬೇಸತ್ತು ರಸ್ತೆ ಮಧ್ಯೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಹಿಗೆಯೇ ಮುಂದುವರೆದರೆ ಮತ್ತೆ ಅಂತಹ ಸ್ಥಿತಿ ಬರುತ್ತದೆ’ ಎನ್ನುತ್ತಾರೆ ಸಗಟು ತರಕಾರಿ ವ್ಯಾಪಾರಿ ನಟರಾಜ್.
ಆಲೂಗೆಡ್ಡೆ ಕೆ.ಜಿಗೆ ₹ 18 ರಂತೆ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ಆಲೂಗೆಡ್ಡೆ ಬೆಳೆ ಬಂದಿರುವುದರಿಂದ ಕಳೆದ ವಾರಕ್ಕೆ ಹೋಲಿಸಿದರೆ ₹ 5 ಕಡಿಮೆಯಾಗಿದೆ. ಬರ, ನುಸಿ ರೋಗದಿಂದ ತೆಂಗಿನ ಕಾಯಿ ₹ 15 ರಂತೆ ಮಾರಾಟ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ವಾರದಿಂದ ತುಂತುರು ಮಳೆ ಆಗುತ್ತಿರುವುದರಿಂದ ತರಕಾರಿಗಳ ಬೆಲೆಯಲ್ಲೂ ಯಾವುದೇ ಏರಿಕೆ ಕಂಡು ಬಂದಿಲ್ಲ. ವಾರದ ಹಿಂದೆ ಕೆ.ಜಿ ಹೀರೆಕಾಯಿ ₹ 30, ಈರುಳ್ಳಿ ಕೆ.ಜಿಗೆ ₹ 15, ಅವರೆಕಾಯಿ ಕೆ.ಜಿ ₹25, ಕೆ.ಜಿ ಶುಂಠಿ ₹ 40 ರಿಂದ ₹ 50, ಕ್ಯಾರೆಟ್ ಕೆ.ಜಿ ₹ 50 ಹಾಗೂ ಮೆಣಸಿನ ಕಾಯಿ ಕೆ.ಜಿಗೆ ₹ 35ಕ್ಕೆ ಲಭ್ಯ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.