ಹಾಸನ: ರೈತರಿಗೆ ಪಹಣಿ ವಿತರಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿದರು. ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್ ನೇತೃತ್ವದದಲ್ಲಿ ನೂರಾರು ಕಾರ್ಯಕರ್ತರು ಕಚೇರಿ ಎದುರು ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ತಹಶೀಲ್ದಾರ್ ಶಿವಶಂಕರಪ್ಪ ಬಂದು ಸಮಸ್ಯೆ ಬಗೆಹರಿಸುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿದರು.
‘ಪ್ರಧಾನ ಮಂತ್ರಿ ಫಸಲ್ ಬಿಮಾ ಬೆಳೆ ವಿಮೆ ಕಂತ ಪಾವತಿಸಲು ರೈತರಿಗೆ ಪಹಣಿ ಹಾಗೂ ದೃಢೀಕರಣ ಪತ್ರ ಬೇಕಾಗಿದೆ. ಆದರೆ ತಾಲ್ಲೂಕಿನಲ್ಲಿ ರೈತರು ಪಹಣಿ ಪಡೆಯಲು ಪರಿತಪಿಸುತ್ತಿದ್ದಾರೆ. ನಾಡ ಕಚೇರಿಗಳಲ್ಲೂ ರೈತರು ತಾಸುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳದಂತಹ ಪರಿಸ್ಥಿತಿ ಸೃಷ್ಟಿಸಿರುವ ಅಧಿಕಾರಿಗಳು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘50 ಮಂದಿ ರೈತರು ಪಹಣಿಗೆ ದಿನ ಪೂರ್ತಿ ನಿಂತರೂ ಕೇವಲ ನಾಲ್ಕೈದು ಮಂದಿಗೆ ಮಾತ್ರ ಪಹಣಿ ಲಭ್ಯವಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿಯೇ ಇಂತಹ ಪರಿಸ್ಥಿತಿ ಉಂಟಾಗಿರುವುದರಿಂದ ರೈತರಿಗೆ ಬೆಳೆ ವಿಮೆ ಪಾವತಿ ಮಾಡಲು ಸಾಧ್ಯವಾಗಿಲ್ಲ. ವಿಮೆ ಪಾವತಿ ಮಾಡಲು ಜುಲೈ 15 ಕಡೆ ದಿನ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಜುಲೈ 15ರ ನಂತರ ವಿಮೆ ಕಂತನ್ನು ಪಾವತಿಸಿಕೊಳ್ಳುವುದಿಲ್ಲ’ ಎಂದು ಅಲವತ್ತುಕೊಂಡರು.
ಸಾಲಗಾಮೆ, ಕಸಬಾ, ಶಾಂತಿಗ್ರಾಮ, ಕಟ್ಟಾಯ ಹೋಬಳಿ ಮತ್ತು ಗ್ರಾಮ ಪಂಚಾಯಿತಿಗಳಲ್ಲೂ ಸರಿಯಾಗಿ ರೈತರಿಗೆ ಪಹಣಿ ಲಭ್ಯವಾಗುತ್ತಿಲ್ಲ. ಇದರಿಂದ ಅನಾನುಕೂಲ ಉಂಟಾಗಿದೆ. ಕೂಡಲೇ ಹೆಚ್ಚುವರಿ ಕೌಂಟರ್ಗಳನ್ನು ತೆರೆದು ಪಹಣಿ ವಿತರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಮಹಮ್ಮದ್ ತಲಾಹ, ಚಂದು, ಮುಖಂಡರಾದ ರವಿ, ರಘು, ಆಸ್ಲಾಂ, ರಾಮು ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.