ADVERTISEMENT

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದಿರಿ

ಮಕ್ಕಳ ದಿನಾಚರಣೆ; ವಿದ್ಯಾರ್ಥಿಗಳಿಗೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 9:58 IST
Last Updated 16 ನವೆಂಬರ್ 2017, 9:58 IST

ಹಾಸನ: ಆಧುನಿಕ ಮತ್ತು ಪಾಶಿಮಾತ್ಯ ಸಂಸ್ಕೃತಿಗೆ ಮಾರು ಹೋಗದಂತೆ ಮಕ್ಕಳನ್ನು ತಡೆಯುವುದು ಪೋಷಕರ ಜವಾಬ್ದಾರಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹೇಳಿದರು.

ನಗರದ ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾಶಾಲೆಯಲ್ಲಿ ನೆಹರೂ ಯುವ ಕೇಂದ್ರ, ಹೇಮಾವತಿ ಮಹಿಳಾ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಹಾಗೂ ಗುಲಾಬಿಯನ್ನು ನೆಹರೂ ಬಹಳ ಇಷ್ಟ ಪಡುತ್ತಿದ್ದರು. ಮಕ್ಕಳಿಗೆ ತಂದೆ, ತಾಯಿಗಳೇ ಒಳ್ಳೆಯ ಸ್ನೇಹಿತರು. ಯಾವುದೇ ವಿಷಯವನ್ನು ಮಕ್ಕಳೊಂದಿಗೆ ಮುಚ್ಚಿಡದೆ ಮುಕ್ತವಾಗಿ ಚರ್ಚಿಸಿ ಎಂದು ಹೇಳಿದರು.

ADVERTISEMENT

ನಿವೃತ್ತ ಪ್ರಾಂಶುಪಾಲ ಬಿ.ಎನ್. ರಾಮಸ್ವಾಮಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಕಲಿಸುವ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕು. ಮಕ್ಕಳ ಸೃಜನಶೀಲತೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಎ.ವಿ.ಕೆ. ಕಾಲೇಜಿನ ಪ್ರಾಧ್ಯಾಪಕ ಸಿ.ಚ. ಯತೀಶ್ವರ್, ಜಗತ್ತಿನಲ್ಲಿ ಅನೇಕ ಅದ್ಬುತಗಳಿರಬಹುದು. ಆದರೆ, ಮಗುವಿಗಿಂತ ಮಿಗಿಲಾದ ಅದ್ಬುತ ಇನ್ನೊಂದಿಲ್ಲ. 16ನೇ ವಯಸ್ಸಿನವರೆಗೂ ಉತ್ಸಾಹಶೀಲವಾದ ಕಾಲಘಟ್ಟ. ಬಾಲ್ಯಾವಸ್ಥೆ ಅತ್ಯಂತ ಸುಂದರವಾದ ಸಮಯ, ಅದನ್ನು ಹಾಳು ಮಾಡಿಕೊಳ್ಳದೆ ಸಂತೋಷ ಅನುಭವಿಸಬೇಕು ಎಂದರು.

ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾ ಶರ್ಮಾ ಮಾತನಾಡಿ, ಮಕ್ಕಳು ಮೊಬೈಲ್ ಹಾಗೂ ಇಂಟರ್‌ನೆಟ್ ಗೀಳಿಗೆ ಬೀಳದೆ ಓದುವ ಕಡೆ ಗಮನ ಹರಿಸಬೇಕು. ಶಾಲೆಯಲ್ಲಿ ಕೊಡುವ ಪ್ರಾಜೆಕ್ಟ್ ವಿಷಯಗಳಿಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸದೆ ಮಿದುಳಿಗೆ ಕೆಲಸ ಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಾಲೆಯ ಕಾರ್ಯದರ್ಶಿ ಎಂ. ನಟರಾಜ್, ಹೇಮಾವತಿ ಮಹಿಳಾ ಸಂಘದ ನಿರ್ದೇಶಕಿ ಸರ್ವಮಂಗಳಾ ಜಯರಾಂ, ಶಾಲೆಯ ಮುಖ್ಯಶಿಕ್ಷಕ ರವಿ, ಜಮುನಾ, ಸುನಂದಾ ಕೃಷ್ಣ ಇದ್ದರು.

ವಿವಿಧ ಸ್ಪರ್ಧೆಯಲ್ಲಿ ವಿಜೇರಾದವರಿಗೆ ಬಹುಮಾನ ನೀಡಲಾಯಿತು.  ಪ್ರಬಂಧ ರಚನೆ ಸ್ಪರ್ಧೆ: ವಿಜಯ ಶಾಲೆಯೆ ಗ್ರೀಷ್ಮ ಪ್ರಥಮ ಸ್ಥಾನ, ಎಸ್.ಆರ್.ಎಸ್ ಪ್ರಜ್ಞಾ ಶಾಲೆಯ ಡಿ.ಮಾನ್ಯ ದ್ವಿತೀಯ, ವಿಜಯ ಶಾಲೆಯ ಡಿ.ಯುಕ್ತಿ ತೃತೀಯ ಬಹುಮಾನ ಪಡೆದರು.‌

ಫ್ಯಾನ್ಸಿ ಡ್ರೆಸ್: ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾಶಾಲೆಯ ಪ್ರಜ್ಞಾ ಎನ್. ರಾಜ್ ಪ್ರಥಮ, ಪವನ್ ದ್ವಿತೀಯ ಹಾಗೂ ವಿಜಯಾ ಶಾಲೆಯ ವಿ.ಕೆ. ಸಿದ್ದಾರ್ಥ ತೃತೀಯ ಬಹುಮಾನ ಪಡೆದರು.

ಚಿತ್ರಕಲಾ: ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾಶಾಲೆಯ ಸಪ್ತ ಸ್ವರೂಪ್ ಪ್ರಥಮ , ವಿಜಯ ಶಾಲೆಯ ಸಿ.ಕೆ. ಹೇಮಂತ್ ದ್ವಿತೀಯ, ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾಶಾಲೆಯ ಟಿ.ಎಂ. ಹರ್ಷವರ್ಧನ ತೃತೀಯ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.