ಹಳೇಬೀಡು: ‘ಹಳೇಬೀಡು ಹೋಬಳಿ ಬಂಡಿಲಕ್ಕನಕೊಪ್ಪಲು ಒಣಭೂಮಿ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಆಯ್ಕೆಯಾಗಿದೆ’ ಎಂದು ಶಾಸಕ ವೈ.ಎನ್,ರುದ್ರೇಶಗೌಡ ಹೇಳಿದರು. ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ಗುರುವಾರ ಲಂಬಾಣಿ ತಾಂಡಾದ ಸೇವಾಲಾಲ್ ಸಮುದಾಯ ಭವನದ ಉದ್ಘಾಟಿಸಿ ಮಾತನಾಡಿದರು.
ಬಂಜಾರ ತಾಂಡಾ ಅಭಿವೃದ್ಧಿ ನಿಗಮದ ₹12 ಲಕ್ಷ ಅನುದಾನದಲ್ಲಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣವಾಗಿದೆ. ತೇರಿನ ಮನೆ ನಿರ್ಮಾಣ ಹಾಗೂ ನೀರಿನ ಪೂರೈಕೆಗೆ ತಲಾ ₹ 5 ಲಕ್ಷ ಮಂಜೂರಾಗಿದೆ. ರಸ್ತೆ ಡಾಂಬರೀಕರಣಕ್ಕೂ ಪ್ರಸ್ತಾವನೆ ಸಲ್ಲಿಸ ಲಾಗಿದೆ ಎಂದು ಶಾಸಕರು ತಿಳಿಸಿದರು.
ಹಳೇಬೀಡು–ಹಗರೆ ರಸ್ತೆ ಡಾಂಬರೀಕರಣಕ್ಕೆ ₹ 2.5 ಕೋಟಿ ಬಿಡುಗಡೆಯಾಗಿದೆ. ಹಳೇಬೀಡಿನ ರಾಷ್ಟ್ರೀಯ ಹೆದ್ದಾರಿ 234ರಿಂದ ಜೈನಬಸದಿಯವರೆಗೆ ₹95 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗಲಿದೆ. ಹುಲಿಕೆರೆ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಹನಿಕೆ ಚಿಕ್ಕಮಗಳೂರು ರಸ್ತೆ ಪೂರ್ಣಗೊಳಿಸಲು ₹10ರಿಂದ 12 ಕೋಟಿ ಅಗತ್ಯವಿದ್ದು, ಸರ್ಕಾದ ಜತೆ ಚರ್ಚಿಸಲಾಗುವುದು ಎಂದರು.
ಜಿ.ಪಂ ಸದಸ್ಯ ಎಚ್.ಎಂ.ಮಂಜಪ್ಪ, ‘ಬಂಡಿಲಕ್ಕನಕೊಪ್ಪಲು, ತಾಂಡಾ ಜನರು ಶ್ರಮ ಜೀವಿಗಳು. ಮೂಲಸೌಲಭ್ಯಗಳು ಬರಬೇಕಾಗಿದೆ’ ಎಂದರು. ಖಾದಿ ಗ್ರಾಮೋದ್ಯೋಗ ಮಂಡಳಿ ಸದಸ್ಯ ವೈ.ಎನ್.ಕೃಷ್ಣೇಗೌಡ, ಗ್ರಾ.ಪಂ ಅಧ್ಯಕ್ಷ ಪುಟ್ಟಬೀರೇಗೌಡ, ಸದಸ್ಯ ಯದುಪತಿ, ಮುಖಂಡರಾದ ಮಹೇಶ್, ತೋಳಚನಾಯಕ್, ನಿವೃತ್ತ ಅಧಿಕಾರಿ ರಾಮಗಿರಿ ನಾಯಕ್, ತಾ.ಪಂ ಸದಸ್ಯ ವಿಜಯ್ ಕುಮಾರ್, ಗ್ರಾ.ಪಂ ಸದಸ್ಯರಾದ ನಾಗಿಬಾಯಿ, ಕೃಷ್ನೇಗೌಡ, ಮುಖಂಡರಾದ ಅಪ್ಪಿಹಳ್ಳಿ ವಿರೂಪಾಕ್ಷ, ಸೇವಾನಾಯ್ಕ, ಚಂದ್ರನಾಯ್ಕ, ಮೂರ್ತಿನಾಯ್ಕ, ರವಿನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.