ಚನ್ನರಾಯಪಟ್ಟಣ: ‘ಭಕ್ತಿ ಮತ್ತು ಜ್ಞಾನದ ಅರಿವು ಇಲ್ಲದಿದ್ದರೆ ಬದುಕು ವ್ಯರ್ಥ’ ಎಂದು ಆದಿಚುಂಚನಗಿರಿ ಮಠಾಧೀಶ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಬಸವೇಶ್ವರಸ್ವಾಮಿ ದೇಗುಲದ ನಿರ್ಮಿಸಲು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ ಅವರು, ದೇಗುಲಗಳು ಶ್ರದ್ಧಾ, ಭಕ್ತಿಯ ಕೇಂದ್ರವಾಗಿದ್ದು, ಮನಸ್ಸಿಗೆ ನೆಮ್ಮದಿ ನೀಡುವ ತಾಣ’ ಎಂದರು.
₨ 30 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಬಸವೇಶ್ವರಸ್ವಾಮಿ ದೇಗುಲ ನಿರ್ಮಾಣ ಆಗಲಿದೆ. 2–3 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಲ್ಯಾಣಿ ಸೇರಿ ಕಬ್ಬಳಿಯ ದೇವಸ್ಥಾನದ ಆವರಣ ನವೀಕರಣಗೊಳ್ಳಲಿದೆ. ದೇವಸ್ಥಾನದಲ್ಲಿ ಮೂಲ ವಿಗ್ರಹವನ್ನು ಹಾಗೆ ಉಳಿಸಿಕೊಳ್ಳಲಾಗುವುದು’ ಎಂದು ಹೇಳಿದರು.
ಸತ್ಸಂಗ ಭವನ, ಸಮುದಾಯ ಭವನ ನಿರ್ಮಿಸಲಾಗುವುದು. ಸತ್ಸಂಗ ಭವನದಲ್ಲಿ ಆಧ್ಯಾತ್ಮದ ಕಾರ್ಯಕ್ರಮ ರೂಪಿಸಲಾಗುವುದು. ತಮಿಳುನಾಡಿನ ಶಂಕರಸ್ತಪತಿ ತಂಡ ದೇಗುಲ ನಿರ್ಮಾಣ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು. ‘ಕಬ್ಬಳಿಯಲ್ಲಿ 86ನೇ ವರ್ಷದ ದನಗಳ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ನ.4 ವರೆಗೆ ಮುಂದುವರೆಯಲಿದೆ ಎಂದು ನುಡಿದರು.
ಶಾಖಾ ಮಠದ ಶಂಭುನಾಥಸ್ವಾಮೀಜಿ, ಕಬ್ಬಳಿಯ ಶಿವಪುತ್ರ ಸ್ವಾಮೀಜಿ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಎಂ.ಎ.ಗೋಪಾಲಸ್ವಾಮಿ, ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಬ್ಬಳಿರಂಗೇಗೌಡ, ಜಿ.ಪಂ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯಕುಮಾರ್, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಗ್ರಾಮದ ಗಣೇಶ್ಗೌಡ, ಜಿ.ಪಂ ಸದಸ್ಯ ಸಿ. ಮಂಜೇಗೌಡ, ಪ್ರಮುಖರಾದ ಸಿ.ಎನ್. ಅಶೋಕ್, ಎ.ಸಿ. ಆನಂದಕುಮಾರ್, ಎಚ್.ಸಿ. ದೀಪು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.