ಹಾಸನ: ‘ಅಮೃತ್ ಮಹಲ್ ಕಾವಲುಗಾರನೇ ಅಲ್ಲ ಎಂದು ಮಾದಿಗ ದಂಡೋರ ಸಮಿತಿ ಸದಸ್ಯರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇದೆ’ ಎಂದು ಅಮೃತ್ ಮಹಲ್ ಕಾವಲುಗಾರ ಎಸ್.ಹರೀಶ್ ಕುಮಾರ್ ಹೇಳಿದರು.
‘ಕಾವಲು ಜಾಗವನ್ನು ಒತ್ತುವರಿ ಮಾಡಿಕೊಂಡು ಮತ್ತೊಬ್ಬರಿಗೆ ಮಾರಾಟ ಮಾಡಿದ್ದೇನೆ ಎಂದು ಮಾದಿಗ ದಂಡೋರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಪಿ.ಚಂದ್ರಯ್ಯ ಮಾಡಿರುವ ಆರೋಪವನ್ನು ದಾಖಲೆ ಸಮೇತ ಸಾಬೀತು ಪಡಿಸಬೇಕು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲಾಗುವುದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
‘ಕೆಲ ದಿನಗಳ ಹಿಂದೆ ಅರಸೀಕೆರೆ ತಾಲ್ಲೂಕಿನ ಹಬ್ಬನಘಟ್ಟದ ಅಮೃತ್ ಮಹಲ್ ಕಾವಲಿನಲ್ಲಿ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು.
ಆದರೆ, ಚಂದ್ರಯ್ಯ ಅವರು, ನಾನು ಅಲ್ಲಿಯ ಕಾವಲುಗಾರನೇ ಅಲ್ಲ. ಕಾವಲಿನ 15 ಎಕರೆಯನ್ನು ಅಕ್ರಮವಾಗಿ ಕಬಳಿಸಿ ಮತ್ತೊಬ್ಬರಿಗೆ ಮಾರಾಟ ಮಾಡಿದ್ದೇನೆ ಎಂದು ತೇಜೋವಧೆ ಮಾಡಿದ್ದಾರೆ. ಹತ್ತು ದಿನಗಳಲ್ಲಿ ಸಾಕ್ಷಿ ಸಮೇತ ಆರೋಪ ಸಾಬೀತು ಪಡಿಸಬೇಕು’ ಎಂದು ಸವಾಲು ಹಾಕಿದರು.
‘ರಾಜ್ಯದಲ್ಲಿ 54 ಸಾವಿರ ಎಕರೆ ಅಮತ್ ಮಹಲ್ ಕಾವಲು ಜಾಗವಿದ್ದು, ಈಗಾಗಲೇ ಹೈಕೋರ್ಟ್ ಮತ್ತು ಸರ್ಕಾರ ಆದೇಶದಂತೆ ಆರು ಜಿಲ್ಲೆಗಳಲ್ಲಿ ಆಗಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಕೆಲ ಪ್ರಭಾವಿಗಳು ಕಾವಲು ಜಾಗವನ್ನು ಅತಿಕ್ರಮಿಸಿಕೊಳ್ಳುತ್ತಿದ್ದಾರೆ.
ಆದರೆ, ತಲೆ, ತಲಾಂತರದಿಂದ ಗೋವುಗಳನ್ನು ರಕ್ಷಿಸಿಕೊಂಡು ಬರುತ್ತಿರುವ ವಂಶಸ್ಥರಿಗೆ ಮಾತ್ರ ಸರ್ಕಾರ ಇದುವರೆಗೂ ಯಾವುದೇ ಸೌಲಭ್ಯ ನೀಡಿಲ್ಲ’ ಎಂದು ಅಲವತ್ತುಗೊಂಡರು. ಪತ್ರಿಕಾಗೋಷ್ಠಿಯಲ್ಲಿ ಎಚ್.ಎನ್.ನಂಜೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.