ADVERTISEMENT

ಮೇವು ಪೂರೈಕೆ ನಿರ್ಲಕ್ಷ್ಯ: ರೈತರ ಆಕ್ರೋಶ

ಮೇವೇ ಇಲ್ಲದ ಮೇಲೆ ಮೇವು ಕೇಂದ್ರಗಳನ್ನು ಹೇಗೆ ನಿರ್ವಹಿಸಬೇಕು: ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:28 IST
Last Updated 23 ಮಾರ್ಚ್ 2017, 6:28 IST

ಅರಸೀಕೆರೆ: ತಾಲ್ಲೂಕಿನಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಜಾನುವಾರು ಗಳಿಗೆ ಮೇವು ಪೂರೈಕೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ತಾಲ್ಲೂಕಿನ ಜೆ.ಸಿ.ಪುರ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್‌ ಎನ್‌.ವಿ.ನಟೇಶ್‌, ಅರಸೀಕೆರೆ ಗ್ರಾಮಾಂತರ ಸಿಪಿಐ ಸಿದ್ದ ರಮೇಶ್‌ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆ ಆಲಿಸಿದರು.

ರೈತರಾದ ರೇವಣ್ಣ ಮಾತನಾಡಿ, ‘ಜಾನುವಾರುಗಳಿಗೆ ಮೇವಿಲ್ಲದೆ ಅವುಗಳನ್ನು ಕಾಪಾಡುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ಮುಳುಗಿ ದ್ದಾರೆ. ಆದರೆ, ಇಲ್ಲಿ ಕೆಲವು ಅಧಿಕಾರಿಗಳು ಮೇವು ವಿತರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಕಿಡಿಕಾರಿದರು.

ರೈತರೊಂದಿಗೆ ಮಾತನಾಡಿದ ತಹಶೀಲ್ದಾರ್‌ ನಟೇಶ್‌, ‘ಜಾನುವಾರು ಗಳಿಗೆ ಮೇವಿನ ಅಭಾವ ತಲೆದೋರ ದಂತೆ ತಾಲ್ಲೂಕಿನ ಜೆ.ಸಿ.ಪುರ, ಬಾಣಾವರ, ಗಂಡಸಿ ಹಾಗೂ ಜಾವಗಲ್‌ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದೆ. ಆದರೆ, ಇಲ್ಲಿ ಸಂಗ್ರಹಿಸಿರುವ ಮೇವನ್ನು ರೈತರು ಅತಿಕ್ರಮವಾಗಿ ತೆಗೆದುಕೊಂಡು ಹೋದರೆ ಏನು ಮಾಡುವುದು’ ಎಂದು ಅವರು ರೈತರನ್ನೇ ಪ್ರಶ್ನಿಸಿದರು?.

‘ರಾಜ್ಯದಲ್ಲಿ ಎಲ್ಲಿಯೂ ಮೇವು ಸಿಗುತ್ತಿಲ್ಲ. ಮೇವು ಇಲ್ಲದ ಮೇಲೆ ಮೇವು ಕೇಂದ್ರಗಳನ್ನು ಹೇಗೆ ನಿರ್ವಹಿಸಬೇಕು ನೀವೇ ಹೇಳಿ. ಜಾನುವಾರುಗಳಿಗೆ ಗುಣಮಟ್ಟದ ಮೇವು ಕೊಡಬೇಕು ಎಂಬ ಬಯಕೆ ನಮಗೂ ಇದೆ. ಎಲ್ಲಿಯಾದರೂ ಮೇವು ಸಿಗುವ ಮಾಹಿತಿ ಇದ್ದರೆ ನೀವೇ ತಿಳಿಸಿ’ ಎಂದು ಅವರು ಹೇಳಿದರು.

‘ಜಿಲ್ಲಾಧಿಕಾರಿ ಸೂಚನೆಯಂತೆ ಪ್ರತಿದಿನ ಒಂದು ಜಾನುವಾರಿಗೆ 5 ಕೆ.ಜಿಯಂತೆ ಮೇವು ಕೊಡುತ್ತಿದ್ದೇವೆ. ಹಸಿ ಮೇವು ತೂಕ ಹೆಚ್ಚಿದ್ದು, ರಾಸುಗಳಿಗೆ ಸಾಕಾಗುವುದಿಲ್ಲ. ನೀವು ಕೂಡ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು. ಸ್ವಲ್ಪ ಮಳೆ ಬಂದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ’ ಎಂದು ರೈತರಲ್ಲಿ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.