ADVERTISEMENT

ರೈತರು-–ದಲಿತರ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:11 IST
Last Updated 28 ಡಿಸೆಂಬರ್ 2016, 5:11 IST

ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿ ಕೆರಗೋಡು ಗ್ರಾಮದಲ್ಲಿ ಮುಳುಗಡೆ ರೈತರು ಮತ್ತು ದಲಿತರ ನಡುವಿನ ಜಮೀನು ವಿವಾದದ ಕಾರಣ ಪರಿಶಿಷ್ಟ  ಜಾತಿ–ಪಂಗಡಗಳ ಆಯೋ ಗದ ಅಧ್ಯಕ್ಷ ಎ.ಮುನಿಯಪ್ಪ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಕೆರಗೋಡು ಗ್ರಾಮದ ಸರ್ವೆ ನಂ. 50ರಲ್ಲಿರುವ 30 ಎಕರೆ ಸರ್ಕಾರಿ ಜಮೀನಿನಲ್ಲಿ ಈ ಗ್ರಾಮದ ದಲಿತ ಕುಟುಂಬಗಳು ಕಳೆದ 25 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಲ್ಲದೆ ಕಾಫಿ ತೋಟ ಮಾಡಿಕೊಂಡಿದ್ದರು.

ಗ್ರಾಮದ ಶಿವಣ್ಣ, ವೀರಭದ್ರ, ಅಣ್ಣಪ್ಪ ಸೇರಿದಂತೆ ಐವರು 1991ರಲ್ಲಿ ನಮೂನೆ 50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿ ಜಮೀನು ಮಂಜೂರು ಮಾಡುವಂತೆ ಕೋರಿದ್ದರು.
ಆದರೆ, ಕಂದಾಯ ಅಧಿಕಾರಿಗಳು ಈ ಜಮೀನನ್ನು ಯಗಚಿ ಜಲಾಶಯ ಯೋಜನೆಯಲ್ಲಿ ಮುಳುಗಡೆ ರೈತರಿಗೆ ಮೀಸಲಿಟ್ಟು ಹೊಸಮೇನಹಳ್ಳಿ  ಗ್ರಾಮದ ನಜೀರ್‌ ಆಹಮ್ಮದ್‌, ಜಮಾಲ್‌ ಬಿ, ಮುಜೀಬ್‌, ಮುನವರ್‌ ಪಾಷ, ಭದ್ರೇಗೌಡ ಮುಡನ್‌ಸಾಬ್‌ ಎಂಬುವ ವರಿಗೆ ತಲಾ ನಾಲ್ಕು ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಈ ಸ್ಥಳದಲ್ಲಿ ಮನೆಕಟ್ಟಿಕೊಂಡಿದ್ದ ದಲಿತರಿಗೆ ತಲಾ ಆರ್ಧ ಎಕರೆ ಜಮೀನನ್ನು ಬಿಟ್ಟು ಕೊಡಲು ಹೈಕೋರ್ಟ್‌ ಆದೇಶ ನೀಡಿತ್ತು. ಅದರಂತೆ ನಾವು ಜಮೀನು ಬಿಟ್ಟುಕೊಟ್ಟಿದ್ದೇವೆ ಎಂದು ತಿಳಿಸಿದರು.

ಆದರೆ, ಇದನ್ನು ಒಪ್ಪದ ದಲಿತರು 25 ವರ್ಷಗಳಿಂದ ನಾವು ಜಮೀನು ಉಳುಮೆ ಮಾಡುತ್ತಿದ್ದು, ಇದನ್ನು ನಮಗೆ ಮಂಜೂರು ಮಾಡಿಕೊಡಬೇಕು ಎಂದು ಪರಿಶಿಷ್ಟ ಜಾತಿ, ಪಂಗಡಗಳ ಆಯೋಗಕ್ಕೆ ದೂರು ಸಲ್ಲಿಸಿದ ಕಾರಣ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ದಿವಾಕರ್‌, ಕುಂಬಯ್ಯ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಮುಳುಗಡೆ ರೈತರು ಮತ್ತು ದಲಿತರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಆಕ್ರೋಶಗೊಂಡ ಅಧ್ಯಕ್ಷ ಮುನಿಯಪ್ಪ ಸಮಸ್ಯೆ ಬಗೆಹರಿಸಲು ಇಲ್ಲಿಗೆ ಬಂದಿದ್ದೇನೆ. ಇಬ್ಬರೂ ಕಿತ್ತಾಡಿದರೆ ಯಾವುದೇ ಪ್ರಯೋಜನವಿಲ್ಲ. ಜಿಲ್ಲಾಧಿ ಕಾರಿಗಳಿಂದ ಸಮಗ್ರ ದಾಖಲೆ ಪಡೆದು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವು ದಾಗಿ ಭರವಸೆ ನೀಡಿದರು.

ಸಕಲೇಶಪುರ ಉಪವಿಭಾಗಾಧಿಕಾರಿ ಶಿವರಾಜ್‌, ತಹಶೀಲ್ದಾರ್‌ ಪುಟ್ಟಶೆಟ್ಟಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್‌, ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಯ್ಯ, ದಲಿತ ಮುಖಂಡ ಅರೇಹಳ್ಳಿ ನಿಂಗರಾಜು, ಅಣ್ಣಪ್ಪ, ಎಎಸ್‌ಐ ರಂಗಸ್ವಾಮಿ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.