ಹಾಸನ: ಪರಿಸರ ದಿನಾಚರಣೆ ಕೇವಲ ಜೂನ್ ತಿಂಗಳಿಗೆ ಮಾತ್ರ ಸೀಮಿತವಾಗದೇ ನಿರಂತರ ಪ್ರಕ್ರಿಯೆ ಯಾಗಬೇಕು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆಯ ಚಟುವಟಿಕೆ ಹಲವಾರು ಸಂಘ, ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದು ಎಂದು ಲೇಖಕಿ ಸಿ.ಸುವರ್ಣಾ ಶಿವಪ್ರಸಾದ್ ಅಭಿಪ್ರಾಯಪಟ್ಟರು.
ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಇ.ಎನ್.ಸಿ.ಎಸ್. ಓಪನ್ ಗ್ರೂಪ್ ಆಶ್ರಯದಲ್ಲಿ ಸತ್ಯಮಂಗಲ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಕೃತಿಯ ಕಾಳಜಿ ಪ್ರತಿಯೊಬ್ಬರ ಆದ್ಯತೆಯಾಗಬೇಕು. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದು ಹಾಕಲಾಗುತ್ತಿದೆ. ವನ ಸಂಪತ್ತು ನಾಶವಾಗುತ್ತಿದೆ. ಪ್ರತಿಯೊಬ್ಬರು ತಾವು ವಾಸಿಸುವ ಸುತ್ತಮುತ್ತ ಗಿಡಗಳನ್ನು ಬೆಳೆಸಲು ಮುಂದಾಗಬೇಕು ಎಂದರು.
ಕವಯಿತ್ರಿ ವಾಣಿ ಮಹೇಶ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯನಿಂದ ಪ್ರಕೃತಿ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದರಿಂದ ಪ್ರಕೃತಿ ಅಸಮತೋಲನ ಉಂಟಾಗುತ್ತಿದ್ದು, ಭೂಕಂಪ, ಅಂತರ್ಜಲ ಕುಸಿತ, ಜಾಗತಿಕ ತಾಪಮಾನದ ಹೆಚ್ಚಳ, ಸುನಾಮಿಗೆ ತುತ್ತಾಗುತ್ತಿದ್ದೇವೆ. ಇದರಿಂದ ಹೊರಬರಬೇಕಾದರೆ ಪ್ರಕೃತಿ ರಕ್ಷಣೆ ಮೊದಲ ಆದ್ಯತೆ ಆಗಬೇಕು ಎಂದು ನುಡಿದರು.
ಕವಯಿತ್ರಿ ಎಚ್.ವೇದಶ್ರೀರಾಜ್ ಮಾತನಾಡಿ, ಪ್ರಕೃತಿಯಿಂದಲೇ ಬದುಕುವ ಸಕಲ ಜೀವಿಗಳಲ್ಲಿ ಬೌದ್ಧಿಕ ಬಲ ಹೊಂದಿದ ಮಾನವನಿಂದಲೇ ಅವನತಿ ಆಗುತ್ತಿರುವುದು ದುರಂತ. ಸಸಿ ನೆಡುವುದರ ಮೂಲಕ ಪ್ರಕೃತಿಯ ಉಳಿವಿಗೆ ಪಣತೊಡಬೇಕಿದೆ ಎಂದರು.
ಜಿಲ್ಲಾ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಮಾಲ, ಜಿಲ್ಲಾ ಸಂಘಟನಾ ಆಯುಕ್ತ ಕೊಟ್ರೇಶ್ ಎಸ್.ಉಪ್ಪಾರ್, ಇ.ಎನ್.ಸಿ.ಎಸ್.ಓಪನ್ ಗ್ರೂಪ್ ಕಾರ್ಯದರ್ಶಿ ಆರ್.ಜಿ.ಗಿರೀಶ್, ಹಾಸನ ತಾಲ್ಲೂಕು ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಮಹಾವೀರ್ ಭನ್ಸಾಲಿ, ಸಮಾಜ ಸೇವಕ ಮಹೇಶ್, ರೋವರ್ಸ್ಗಳಾದ ಕುಮಾರಸ್ವಾಮಿ, ಜಶ್ವಂತ್, ಭಾನುಪ್ರಕಾಶ್, ರವಿಕುಮಾರ್, ವಿನಯ್, ತರುಣ, ಭರತ್ಗೌಡ, ನಿತೀಶ್, ವೇದಮೂರ್ತಿ, ಗೈಡ್ಸ್ಗಳಾದ ರೋಸ್ಲಿನ್, ತ್ರಿವೇಣಿ, ಮಾಣಿಕ್ಯ ಕೆ.ಉಪ್ಪಾರ್, ಶಿವಾಗ್ನಿರಾಜ್, ಪಾರ್ಥರಾಜ್, ಸುಚಿತ್ ಎ.ಗೌಡ, ಸಾಹಿತ್ಯ ಕೆ.ಉಪ್ಪಾರ್, ಧನುಷ್ ಎಂ.ಹೊಸೂರ್, ಕರ್ನಾಟಕ ರೈತ ಹಿತ ಸಂರಕ್ಷಣಾ ಅಧ್ಯಕ್ಷ ಮಹೇಂದ್ರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.