ಚನ್ನರಾಯಪಟ್ಟಣ: ಹಿರೀಸಾವೆ–ಜುಟ್ಟನಹಳ್ಳಿ ಏತ ನೀರಾವರಿ ಯೋಜನೆ ಜುಲೈ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಜನಿವಾರ ಕೆರೆ ಬಳಿ ನಿರ್ಮಿಸುತ್ತಿರುವ ಪಂಪ್ಹೌಸ್ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಂಗಳವಾರ ಮಾತನಾಡಿದರು.
ಈಗಾಗಲೇ ಶೇ 65ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಜನಿವಾರ ಕೆರೆ ಸಮೀಪ ಜಾಕ್ವೆಲ್ ಕಾಮಗಾರಿ ಸದ್ಯದಲ್ಲಿ ಪೂರ್ಣಗೊಳ್ಳಲಿದೆ. ಚಲ್ಯ ಗ್ರಾಮದ ಬಳಿ ಜಾಕ್ವೆಲ್ ನಿರ್ಮಾಣ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಜನಿವಾರ ಕೆರೆಯಿಂದ 9.6ಕಿಮೀ ದೂರದ ಬಸವನಹಳ್ಳಿ ಬಳಿ ಕಟ್ಟೆ ನಿರ್ಮಿಸಿ ನಂತರ ಎರಡು ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು. ಲಭ್ಯವಿರುವ 56 ಕ್ಯುಸೆಕ್ ನೀರು ಬಳಸಿ ಹಿರೀಸಾವೆ– ಶ್ರವಣಬೆಳಗೊಳ ಹೋಬಳಿ ವ್ಯಾಪ್ತಿಯ 16 ಕೆರೆಗಳು ಹಾಗೂ ಮಂಡ್ಯ ಜಿಲ್ಲೆ ಸಂತೆಬಾಚಹಳ್ಳಿಯ 6 ಕೆರೆಗಳು ಸೇರಿ 22 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಕೃಷ್ಣೇ ಗೌಡ, ಅಧಿಕಾರಿಗಳಾದ ನಾಗೇಂದ್ರ, ಅಮೃತ್ ರಾಜ್, ಉಮೇಶ್, ವಿಜಯ್, ಮುಖಂಡ ಪುಟ್ಟಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.