ADVERTISEMENT

69 ಗ್ರಾಮಗಳಿಗೆ ಕಾಂಕ್ರೀಟ್‌ ರಸ್ತೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 9:54 IST
Last Updated 12 ಜನವರಿ 2018, 9:54 IST

ಹಳೇಬೀಡು: ₹ 7.69 ಕೋಟಿ ವೆಚ್ಚದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪಂಗಡದ 69 ಹಳ್ಳಿಗಳು ಕಾಂಕ್ರೀಟ್‌ ರಸ್ತೆ ಕಂಡಿವೆ ಎಂದು ಶಾಸಕ ವೈ.ಎನ್‌.ರುದ್ರೇಶಗೌಡ ಹೇಳಿದರು.

ನಾಗರಾಜಪುರ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದ ಅನುದಾನದ ವಿವಿಧ ಗ್ರಾಮಗಳ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ನಿಗಮದಿಂದ ಬೇಲೂರು ತಾಲ್ಲೂಕಿನಲ್ಲಿ 23 ಸಮುದಾಯ ಭವನಗಳ ಕಾಮಗಾರಿ ಪ್ರಗತಿಯಲ್ಲಿದೆ. ಹಳೇಬೀಡಿನಲ್ಲಿ ಅಂಬೇಡ್ಕರ್‌ ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ ₹ 50 ಲಕ್ಷ ಮಂಜೂರಾಗಿದೆ. ಗ್ರಾ.ಪಂ ನಿವೇಶನ ನೀಡಿದಾಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದು ರುದ್ರೇಶಗೌಡ ತಿಳಿಸಿದರು.

ADVERTISEMENT

ವಸತಿ ಯೋಜನೆಯಿಂದ ಬೇಲೂರು ಕ್ಷೇತ್ರಕ್ಕೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಸರ್ಕಾರದಿಂದ 2,350 ಮನೆಗಳು ಮಂಜೂರಾಗಿವೆ. ಮನೆ ನಿರ್ಮಾಣ ಮಾಡಿಕೊಳ್ಳುವ ಫಲಾನುಭವಿಗಳಿಗೆ ₹ 1.50 ಲಕ್ಷ ಸಹಾಯಧನ ದೊರಕುತ್ತದೆ ಎಂದರು.

ಮಸ್ತಕಾಭೀಷೇಕ ಅನುದಾನದಲ್ಲಿ ಬೇಲೂರು ಕ್ಷೇತ್ರಕ್ಕೆ ₹ 7 ಕೋಟಿ ಅನುದಾನ ಬಂದಿದೆ. ಹಳೇಬೀಡು–ಹಗರೆ ರಸ್ತೆ ಅಭಿವೃದ್ಧಿಗೆ ₹ 2.5 ಕೋಟಿ ಮಂಜೂರು ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಖಾದಿ ಗ್ರಾಮೋದ್ಯೋಗ ನಿಗಮದ ಸದಸ್ಯ ವೈ.ಎನ್‌.ಕೃಷ್ಣೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯ್‌ ಕುಮಾರ್‌, ಹಳೇಬೀಡು ಸರ್ಕಾರಿ ಪಿಯು ಕಾಲೇಜು ಅಭಿವೃದ್ಧಿಅಧ್ಯಕ್ಷ ಜಿ.ಸಿ.ಹರೀಶ್‌, ವೆಂಕಟೇಶ್‌, ಎಚ್‌.ಬಿ.ಚಂದ್ರಶೇಖರ್‌ ಮಾತನಾಡಿದರು. ರಂಗಸ್ವಾಮಿ, ಪುಟ್ಟರಾಜು, ಎಲ್‌.ಬಿ.ಬಸವರಾಜು, ನೀಲಕಂಠೇಗೌಡ, ರಾಜನಶಿರಿಯೂರು ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.