ADVERTISEMENT

‘ಎಸ್.ಎಂ. ಕೃಷ್ಣಗೆ ಬರಲಿದೆ ಅಡ್ವಾಣಿ ಪರಿಸ್ಥಿತಿ’

​ಪ್ರಜಾವಾಣಿ ವಾರ್ತೆ
Published 19 ಮೇ 2017, 7:00 IST
Last Updated 19 ಮೇ 2017, 7:00 IST
‘ಎಸ್.ಎಂ. ಕೃಷ್ಣಗೆ ಬರಲಿದೆ ಅಡ್ವಾಣಿ ಪರಿಸ್ಥಿತಿ’
‘ಎಸ್.ಎಂ. ಕೃಷ್ಣಗೆ ಬರಲಿದೆ ಅಡ್ವಾಣಿ ಪರಿಸ್ಥಿತಿ’   

ಹಾವೇರಿ: ‘ಬಿಜೆಪಿಯ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶ್ವಂತ್‌ ಸಿನ್ಹಾ ಮತ್ತಿತರರ ಪರಿಸ್ಥಿತಿಯೇ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಬರಲಿದೆ’ ಎಂದು ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಟ್ಯಾಗೋರ್ ಹೇಳಿದರು.

ನಗರದಲ್ಲಿ ಗುರುವಾರ ಕಾಂಗ್ರೆಸ್ ಮುಖಂಡರ ಸಮಾಲೋಚನಾ ಸಭೆಗೆ ಪೂರ್ವದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

‘ರಾಜ್ಯದ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರಿಗೆ ಕಾಂಗ್ರೆಸ್ ಎಲ್ಲ ಗೌರವ ಹಾಗೂ ಸ್ಥಾನಮಾನಗಳನ್ನು ನೀಡಿತ್ತು. ಆದರೆ, ಅವರು ಬಿಜೆಪಿ ಸೇರಿರುವುದು ವಿಷಾದನೀಯ. ಅವರ ತಪ್ಪು ಮುಂದಿನ ದಿನಗಳಲ್ಲಿ ಅವರಿಗೇ ಅರಿವಾಗಲಿದೆ. ಪಶ್ಚಾತ್ತಾಪ ಪಡುವ ಸ್ಥಿತಿ ಬರಲಿದೆ’ ಎಂದರು.

ADVERTISEMENT

‘ಬಿಜೆಪಿಗಾಗಿ ಹಲವು ದಶಕಗಳ ಕಾಲ ದುಡಿದ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ್ ಸಿನ್ಹಾ ಅವರನ್ನೇ ನಿರ್ಲಕ್ಷಿಸಲಾಗಿದೆ. ಇನ್ನು ಹೊಸದಾಗಿ ಬಿಜೆಪಿಗೆ ಸೇರ್ಪಡೆಗೊಂಡ ಹಿರಿಯರ ಪಾಡು ಹೇಗಿರಬಹುದು? ಎಂದು ನೀವೇ ಊಹಿಸಿ’ ಎಂದರು.

‘ಯಾರೇ ಕಾಂಗ್ರೆಸ್ ತೊರೆದರೂ ನಷ್ಟವಿಲ್ಲ. ಮುಂದಿನ ದಿನಗಳಲ್ಲಿ ಅವರೇ ಪಶ್ಚಾತಾಪ ಪಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸಶಕ್ತವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ತನ್ನ ಯೋಜನೆ ಮತ್ತು ಸಾಧನೆಗಳಿಂದ ಪಕ್ಷವು ಜನರಿಗೆ ಹತ್ತಿರವಾಗಿದೆ’ ಎಂದರು.

ಪಕ್ಷ ಸಂಘಟನೆ:  ‘ಮುಂದಿನ ವಿಧಾನಸಬಾ ಚುನಾವಣೆ ದೃಷಿಯಿಂದ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಲಾಗಿದೆ.

‘ನಾನು ಬೆಳಗಾವಿ ವಿಭಾಗದ ವಿಜಯಪುರ, ಗದಗ, ಹುಬ್ಬಳ್ಳಿ –ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಭೆ ನಡೆಸುತ್ತಿದ್ದೇನೆ. ಮುಂದಿನ ತಿಂಗಳು ವಿಧಾನಸಭಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸುತ್ತೇನೆ. ಪಕ್ಷ ಸಶಕ್ತಗೊಳಿಸುವ ಕುರಿತು ಚಿಂತನೆ ನಡೆಸಲಾಗುವುದು’ ಎಂದರು.

ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಮನೋಹರ ತಹಸೀಲ್ದಾರ್, ಮಾಜಿ ಶಾಸಕರಾದ ಅಜ್ಜಂಪೀರ ಖಾದ್ರಿ ಮತ್ತಿತರರು ಉಪಸ್ಥಿತರಿದ್ದರು.

ಅಳಲು...
ಸಭೆಯಲ್ಲಿ ಜಿಲ್ಲಾ ಮಟ್ಟದ ಎರಡನೇ ಹಂತದ ನಾಯಕರು ಚುನಾವಣೆ ‘ಟಿಕೆಟ್’ ಕುರಿತು ಪದೇ ಪದೇ ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿವೆ.

‘ಸಂಘಟನೆ ಕುರಿತು ಸಮಾಲೋಚನೆ ನಡೆಸಲು ಬಂದಿದ್ದೇನೆ. ಬೇರೆ ವಿಚಾರಗಳನ್ನು ಕೇಳಲು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದ  ಟ್ಯಾಗೋರ್ ಸಮಾಲೋಚನೆ ನಡೆಸಿದರು’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಪ್ರತಿಕ್ರಿಯಿಸಿದರು.

**

ನಾನು ಟಿಕೆಟ್ ಹಂಚಿಕೆ ಅಭ್ಯರ್ಥಿ ಆಯ್ಕೆಗಾಗಿ ಬಂದಿಲ್ಲ. ಪಕ್ಷ ಸಂಘಟನೆಯ ಕುರಿತು ಚರ್ಚೆ ನಡೆಸಲು ಬಂದಿದ್ದೇನೆ
-ಮಾಣಿಕ್ಯಂ ಟ್ಯಾಗೋರ್, ಎಐಸಿಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.