ADVERTISEMENT

ಏತ ನೀರಾವರಿ: ಚಿಗುರಿದ ಕನಸು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 9:39 IST
Last Updated 20 ಏಪ್ರಿಲ್ 2017, 9:39 IST
ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಉದ್ದೇಶಿತ ಬಾಳಂಬೀಡ ಏತ ನೀರಾವರಿ ಯೋಜನೆ ನೀಲ ನಕ್ಷೆಯನ್ನು ಶಾಸಕ ಮನೋಹರ ತಹಸೀಲ್ದಾರ್‌ ಪರಿಶೀಲಿಸಿದರು
ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಉದ್ದೇಶಿತ ಬಾಳಂಬೀಡ ಏತ ನೀರಾವರಿ ಯೋಜನೆ ನೀಲ ನಕ್ಷೆಯನ್ನು ಶಾಸಕ ಮನೋಹರ ತಹಸೀಲ್ದಾರ್‌ ಪರಿಶೀಲಿಸಿದರು   

ಹಾನಗಲ್: ತಾಲ್ಲೂಕಿನ ಬಮ್ಮನಹಳ್ಳಿ ಭಾಗಕ್ಕೆ ನೀರಾವರಿ ಸಂಪರ್ಕ ಕಲ್ಪಿಸುವ ಬೃಹತ್‌ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುವ  ಪ್ರಕ್ರಿಯೆಗಳು ಚಾಲನೆ ಪಡೆದುಕೊಂಡಿವೆ.ಈಗಾಗಲೇ ತಾಲ್ಲೂಕಿನಲ್ಲಿ ಹಲ­ವಾರು ನೀರಾವರಿ ಯೋಜನೆಗಳು ಅನು­ಷ್ಠಾನಗೊಂಡಿವೆ. ಇವುಗಳಲ್ಲಿ ಏತ ನೀರಾವರಿ ಯೋಜನೆಗಳು ಪ್ರಮುಖ­ವಾಗಿವೆ. ಆದರೆ ಬಮ್ಮನಹಳ್ಳಿ ಭಾಗದಲ್ಲಿ ಈತನಕ ಒಂದೂ ನೀರಾವರಿ ಯೋಜನೆ ಜಾರಿಗೆ ಇರಲಿಲ್ಲ. ಈಗ ಉದ್ದೇಶಿತ ‘ಬಾಳಂ­ಬೀಡ ಏತ ನೀರಾವರಿ ಯೋಜನೆ’ ಮೂಲಕ ಈ ಕೊರತೆ ನೀಗುವ ಆಶಯಗಳು ಚಿಗುರಿಕೊಂಡಿವೆ.

‘ಇಂತಹದೊಂದು ಯೋಜನೆ ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ಹಂತದಲ್ಲಿದ್ದು, ಯೋಜನೆಯ ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ಸರ್ಕಾರದ ತಾತ್ವಿಕ ಒಪ್ಪಿಗೆ ದೊರಕಲಿದೆ. ಈ ಯೋಜನೆ ನಿರ್ಮಾಣದಿಂದ ಬಮ್ಮನ­ಹಳ್ಳಿ ಭಾಗದ ಸುಮಾರು 50 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಿದೆ’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಪತ್ರಿಕೆಗೆ ತಿಳಿಸಿದ್ದಾರೆ.

ಯೋಜನೆಯ ಸರ್ವೆ ಕಾರ್ಯ ನಡೆಸುವ ಅಂಗವಾಗಿ ಮಂಗಳವಾರ ಇಲ್ಲಿಗೆ ಬಂದಿದ್ದ ಶಿಗ್ಗಾವಿ ಏತ ನೀರಾ­ವರಿ ಯೋಜನೆಯ ಹುಬ್ಬಳ್ಳಿ ವಿಭಾಗದ ಎಂಜನಿಯರ್‌ ಎಸ್‌.ಕೆ.­ಕುಲಕರ್ಣಿ ಅವರೊಂದಿಗೆ ಶಾಸಕರು ಚರ್ಚೆ ನಡೆಸಿದ್ದರು.  ಯೋಜನೆ ನೀಲ ನಕ್ಷೆಯನ್ನು  ಪರಿಶೀಲಿಸಿದರು. ‘10 ದಿನ­ಗಳ ಒಳಗಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಸರ್ಕಾರದ ಅನು­ಮೋದನೆ ವರದಿ ಸಲ್ಲಿಸಲಾಗುತ್ತದೆ. ಇದ­ಕ್ಕಾಗಿ ಒಂದು ಎನ್‌ಜಿಓಗೆ ಸರ್ವೆ ಕಾರ್ಯದ ಜವಾಬ್ದಾರಿ ಕೊಡಲಾಗಿದೆ’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ತಿಳಿಸಿದರು.

ADVERTISEMENT

ತಾಲ್ಲೂಕಿನ ಬಾಳಂಬೀಡ ಸಮೀ­ಪದ ವರದಾ ನದಿಯಿಂದ ಬಮ್ಮನಹಳ್ಳಿ ಭಾಗದ ಕೆರೆಗಳನ್ನು ತುಂಬಿಸಲು ಸಿದ್ಧಗೊಂಡ ಈ ಯೋಜನೆ ಸುಮಾರು ₹ 300 ಕೋಟಿ ವೆಚ್ಚದ್ದಾಗಲಿದೆಎಂದು ಅಂದಾಜಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆಬಮ್ಮನಹಳ್ಳಿ ಭಾಗದ ರೈತರ ಬಹು ವರ್ಷಗಳ ಕನಸು, ಹೋರಾಟ ಸಾರ್ಥಕವಾಗಲಿದೆ.
‘ತಾಲ್ಲೂಕಿನಲ್ಲಿ ಹರಿದಿರುವ ವರದಾ, ಧರ್ಮಾ ನದಿಗಳು ಬಮ್ಮನಹಳ್ಳಿ ಭಾಗಕ್ಕೆ ದೂರದಲ್ಲಿವೆ. ಆದ್ದರಿಂದ ಇಲ್ಲಿ ನೀರಾವರಿ ಯೋಜನೆಗಳು ಮರೀಚಿಕೆ ಆಗಿದ್ದವು. ಈಗ ಬಾಳಂಬೀಡ ಏತ ನೀರಾವರಿ ಯೋಜನೆಯ ಮೂಲಕ ಇಲ್ಲಿನ ರೈತರ ಬದುಕು ಹಸನುಗೊಳ್ಳುವ ಸಂತಸ ಗರಿಗೆದರಿದೆ’ ಎಂದು ರೈತ­ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.

ಶಿಗ್ಗಾವ ತಾಲ್ಲೂಕಿಗೆ ಹೊಂದಿಕೊಂಡ ಬಮ್ಮನಹಳ್ಳಿ ಭಾಗದ ಗ್ರಾಮಗಳಿಗೆ ಶಿಗ್ಗಾವ ಏತ ನೀರಾವರಿ ಯೋಜ­ನೆಯನ್ನು ವಿಸ್ತರಿಸುವ ಪ್ರಕ್ರಿಯೆಗಳು ನಾಲ್ಕು ವರ್ಷಗಳಿಂದ ನಡೆದಿದ್ದವು. ಆದರೆ ಅದು ಈಡೇರುವ ಭರವಸೆಗಳು ಕ್ಷಿಣಗೊಂಡ ನಂತರ ಈಗ ‘ಬಾಳಂಬೀಡ ಏತ ನೀರಾವರಿ ಯೋಜನೆ’ ಕಾರ್ಯರೂಪಕ್ಕೆ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.