ADVERTISEMENT

ಕೃಷಿ ಕೂಲಿಕಾರನ ಮಗಳಿಗೆ ಐಎಎಸ್‌ ಕನಸು

​ಪ್ರಜಾವಾಣಿ ವಾರ್ತೆ
Published 15 ಮೇ 2017, 6:20 IST
Last Updated 15 ಮೇ 2017, 6:20 IST

ಶಿಗ್ಗಾವಿ: ‘ನಿತ್ಯ ಇತರರ ಹೊಲದಲ್ಲಿ ಕೃಷಿ ಕೂಲಿ ಮಾಡುವ ಅಪ್ಪ ಶಿಕ್ಷಣಕ್ಕೆ ಒತ್ತು ನೀಡುತ್ತಾರೆ. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಅದನ್ನು ಸಹಿಸುತ್ತೇವೆ ಎಂದು ಅವರು ಆತ್ಮವಿಶ್ವಾಸ ತುಂಬುತ್ತಾರೆ. ಅವರ ಪ್ರೋತ್ಸಾಹದ ಮಾತುಗಳೇ  ನನ್ನ ಈ ಸಾಧನೆಗೆ ಪ್ರೇರಣೆ...’ ತಾಲ್ಲೂಕಿನ ಕುಗ್ರಾಮ ನಿಡಗುಂದಿ ವಿದ್ಯಾರ್ಥಿನಿ ಲಲಿತಾ ವೀರಭದ್ರಪ್ಪ ಮೇಳಿ ಮಾತುಗಳಿವು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ (ಶೇ.97.76) ಮೂರನೇ ಸ್ಥಾನ ಪಡೆದ ಚಂದ್ರಾಪುರ ಸರ್ಕಾರಿ ಪ್ರೌಢಶಾಲೆಯ ಈ ವಿದ್ಯಾರ್ಥಿನಿ ಕನ್ನಡಕ್ಕೆ 124, ಇಂಗ್ಲಿಷ್‌ 100, ಸಮಾಜ 100, ಹಿಂದಿ 99, ವಿಜ್ಞಾನ 94 ಹಾಗೂ ಗಣಿತಕ್ಕೆ 94 ಅಂಕ ಗಳಿಸಿದ್ದಾಳೆ.

‘ನನಗೆ ಇಂಗ್ಲಿಷ್ ಕಠಿಣ ಎನಿಸಿತ್ತು. ಹೀಗಾಗಿ ಅದನ್ನು ಸವಾಲಾಗಿ ಸ್ವೀಕರಿಸಿ, ಓದಿದೆ. ಪತ್ರಿಕೆಗಳಲ್ಲಿ ಬರುತ್ತಿದ್ದ ಮಾದರಿ ಪಶ್ನೆ, ಉತ್ತರಗಳನ್ನು ಹಗಲಿರುಳು ಮನನ ಮಾಡುತ್ತಿದ್ದೆ. ಅದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು’ ಎಂದು ಲಲಿತಾ ಪ್ರತಿಕ್ರಿಯಿಸಿದಳು.

ADVERTISEMENT

‘ನಿಡಗುಂದದಿಂದ ಚಂದಾಪುರದ ಪ್ರೌಢಶಾಲೆಗೆ 8 ಕಿಲೊ ಮೀಟರ್ ಅಂತರವಿದೆ. ಜೊತೆಗೆ ದಿನಕ್ಕೆ ಎರಡನೇ ಬಸ್‌ ಸಂಚರಿಸುತ್ತವೆ. ಸಮಯತಪ್ಪಿದರೇ ನಡೆದುಕೊಂಡೇ ಹೋಗಬೇಕಿತ್ತು. ಹೀಗಾಗಿ ಸಮಯ ಪಾಲನೆಗೆ ಹೆಚ್ಚು ಒತ್ತು ನೀಡಿದೆ’ ಎಂದಳು.

‘ಮುಂದೆ ವಿಜ್ಞಾನ ವಿಷಯವನ್ನು ಆಯ್ದುಕೊಂಡು ಓದಿ, ಐಎಎಸ್‌ ಅಧಿಕಾರಿ ಆಗಬೇಕು. ಬಳಿಕ ಗ್ರಾಮೀಣ ಭಾಗದ ಸಮಸ್ಯೆ ಪರಿಹರಿಸಿ, ಆದರ್ಶ ಗ್ರಾಮಗಳನ್ನಾಗಿ ರೂಪಿಸುವ ಕನಸಿದೆ’ ಎಂದು ನುಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.