ADVERTISEMENT

'ಗುರು, ಗುರಿ ನೀಡುವ ಧರ್ಮ ಸಭೆ'

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 9:59 IST
Last Updated 2 ಡಿಸೆಂಬರ್ 2017, 9:59 IST

ಹಾವೇರಿ: ಗುರು ಮತ್ತು ಗುರಿಯ ದರ್ಶನ ನೀಡುವುದೇ ಧರ್ಮ ಸಭೆ ಎಂದು ಮಡ್ಲೂರ ಮುರುಘ ರಾಜೇಂದ್ರಮಠದ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು. ನಗರದ ಹೊಸಮಠದ ಬಸವಕೇಂದ್ರದಲ್ಲಿ ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಸ್ವಾಮಿಜಿ ಹಾಗೂ ಅಥಣಿ ಮುರುಘರಾಜೇಂದ್ರ ಶಿವಯೋಗಿಗಳ ಸ್ಮರಣೋತ್ಸವದ ಅಂಗವಾಗಿ ನಡೆಯುತ್ತಿರುವ ‘ಶರಣ ಸಂಸ್ಕೃತಿ ಉತ್ಸವ’ ದಲ್ಲಿ ಶುಕ್ರವಾರ ಅವರು ಮಾತನಾಡಿದರು.

ಜೀವನದಲ್ಲಿ ಯಶಸ್ಸು ಕಾಣಲು ಗುರು ಮತ್ತು ಗುರಿ ಬಹುಮುಖ್ಯ. ಇಂತಹ ಧರ್ಮ ಕಾರ್ಯಕ್ರಮಗಳಲ್ಲಿ ಗುರುಗಳು ಗುರಿಯನ್ನು ತೋರುತ್ತಾರೆ. ಅದು ಬದುಕಿನ ದಾರಿಯೂ ಹೌದು. ಯಾವುದನ್ನು ಆಯ್ಕೆ ಮಾಡಬೇಕು, ಹೇಗೆ ನಡೆಯಬೇಕು ಎಂಬುದು ಸ್ಪಷ್ಟಗೊಳ್ಳುತ್ತದೆ ಎಂದರು.

ಹೊಸಮಠದ ಚರಮೂರ್ತಿ ಬಸವ ಶಾಂತ ಲಿಂಗ ಸ್ವಾಮೀಜಿ ಮಾತನಾಡಿ, ‘ಸಹಜ ಶಿವಯೋಗ, ವೈಚಾರಿಕ ಚಿಂತನೆ, ವೈಜ್ಞಾನಿಕ ಆಲೋಚನೆಗಳು ಅಂತರಂಗಕ್ಕೆ ಶಕ್ತಿ ತುಂಬುತ್ತವೆ. ಇಂತಹ ಚಿಂತನೆಗಳನ್ನು ಮುರುಘಾ ಶರಣರು ಜಮುರಾ ನಾಟಕಗಳ ಸುತ್ತಾಟದ ಮೂಲಕ ಪಸರಿಸುವಂತೆ ಮಾಡಿದ್ದಾರೆ. ಇದೊಂದು ಸಂಚಲನ’ ಎಂದರು.

ADVERTISEMENT

ಭಾರತೀಯ ಸಂಸ್ಕೃತಿ, ಆಚಾರ ಮತ್ತು ವಿಚಾರಗಳನ್ನು ಯುವ ಜನತೆಯಲ್ಲಿ ಬಿತ್ತುವ ಕಾರ್ಯವನ್ನು ನಾವಿಂದು ಮಾಡಬೇಕಾಗಿದೆ ಎಂದು ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮತ್ತು ಮಾಜಿ ಶಾಸಕ ನೆಹರೂ ಓಲೇಕಾರ ಅವರು ಮಾತನಾಡಿದರು. ಪ್ರಮುಖರಾದ ವರ್ತಕ ಬಿ.ಎನ್. ಪಾಟೀಲ, ಎಸ್.ಆರ್.ಪಾಟೀಲ. ರುದ್ರೇಶ ಚಿನ್ನಣ್ಣನವರ, ಉದ್ಯಮಿ ಪ್ರಕಾಶ ಶೆಟ್ಟಿ, ಶಿವಬಸಪ್ಪ ಮುದ್ದಿ ಇದ್ದರು. ಬಳಿಕ ಜಮುರಾ ತಂಡದಿಂದ ಶರಣ ಪಥ ಕ್ರಾಂತಿಪಥ ಎಂಬ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.