ಸವಣೂರ (ಹಾವೇರಿ ಜಿಲ್ಲೆ): ‘ತ್ಯಾಜ್ಯ ವಿಲೇವಾರಿಗೆ ಬಳಸುವ ಟ್ರ್ಯಾಕ್ಟರ್ನಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಗಳ ಮೆರವಣಿಗೆ ಮಾಡಿ ಇಬ್ಬರು ಮಹಾ ನಾಯಕರನ್ನು ಅವಮಾನಿಸಲಾಗಿದೆ’ ಎಂದು ಆರೋಪಿಸಿ ದಲಿತ ಸಮುದಾಯದ ಯುವಕರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.
‘ಅಂಬೇಡ್ಕರ್ ಹಾಗೂ ಬಾಬೂಜಿ ಜಯಂತಿ ಆಚರಣೆ ಅಂಗವಾಗಿ ಇಬ್ಬರು ನಾಯಕರ ಭಾವಚಿತ್ರಗಳ ಮೆರವಣಿಗೆಗೆ ಈ ಟ್ರ್ಯಾಕ್ಟರ್ ಬಳಸಲಾಗಿತ್ತು. ಈ ಹಿಂದೆಯೂ ಇದೇ ರೀತಿಯ ಪ್ರಮಾದ ನಡೆದಿತ್ತು. ಆದರೂ, ಎಚ್ಚೆತ್ತುಕೊಳ್ಳದ ತಾಲ್ಲೂಕು ಆಡಳಿತ ಮತ್ತೆ ಅದೇ ಪ್ರಮಾದ ಮಾಡಿದೆ. ಅಲ್ಲದೇ, ಕಾರ್ಯಕ್ರಮಕ್ಕೆ ಸಮಾಜದ ಮುಖಂಡರನ್ನು ಆಹ್ವಾಸಿಲ್ಲ. ಸಮುದಾಯಕ್ಕೆಮೀಸಲಾದ ಹಣದ ದುರುಪಯೋಗ ನಡೆಯುತ್ತಿದೆ’ ಎಂದು ಪ್ರತಿಭಟನಾಕಾರರು ದೂರಿದರು.
ಕ್ರಮಕ್ಕೆ ಆಗ್ರಹ: ಪ್ರತಿಭಟನೆಗೆ ಸ್ಪಂದಿಸಿದ ಶಾಸಕ ಬಸವರಾಜ ಬೊಮ್ಮಾಯಿ, ‘ಈ ಪ್ರಮಾದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಸರ್ಕಾರವು ಜಿಲ್ಲಾಡಳಿತದ ಮೂಲಕ ಜಯಂತಿ ಆಚರಣೆಗೆ ಹಲವಾರು ನಿರ್ಬಂಧಗಳನ್ನು ಹೇರುತ್ತಿದೆ. ಈ ರೀತಿ ಮೂಗು ತೂರಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಉಪ ವಿಭಾಗಾಧಿಕಾರಿಗೆ ಹೇಳಿದರು.
‘ಮೂರು ತಿಂಗಳಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಪೂರ್ಣಗೊಳ್ಳಲಿದೆ. ಪುತ್ಥಳಿ ಪ್ರತಿಷ್ಠಾಪನೆಯೊಂದಿಗೆ ಡಾ. ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸೋಣ’ ಎಂದು ಶಾಸಕ ಬೊಮ್ಮಾಯಿ ಅವರು ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.