ADVERTISEMENT

‘ಪಾರ್ಥೇನಿಯಂ: ರಾಷ್ಟ್ರೀಯ ಕಳೆ’

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 5:38 IST
Last Updated 28 ಆಗಸ್ಟ್ 2017, 5:38 IST

ಹಾವೇರಿ: ‘ಕಾಂಗ್ರೆಸ್ ಕಸ ಎಂಬ ರೂಢನಾಮ ಹೊಂದಿದ ‘ಪಾರ್ಥೇ ನಿಯಂ’ ವಿನಾಶಕಾರಿಯಾಗಿದ್ದು, ‘ರಾಷ್ಟ್ರೀಯ ಕಳೆ’ ಎಂದು ಘೋಷಿಸ ಲ್ಪಟ್ಟಿದೆ’ ಎಂದು  ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿ ಡಾ. ಪ್ರಿಯಾ ಪಿ. ಹೇಳಿದರು.

ರಾಣೆಬೆನ್ನೂರು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಈಚೆಗೆ ಪಾರ್ಥೇನಿಯಂ ಕಸವನ್ನು ಕೀಳುವ ಮೂಲಕ ಚಾಲನೆ ಗೊಂಡ ‘ಪಾರ್ಥೇನಿಯಂ ನಿರ್ಮೂಲನಾ ಜಾಗೃತಿ ಸಪ್ತಾಹ’ದಲ್ಲಿ ಮಾತನಾಡಿದರು.

‘ಈ ಕಳೆಯನ್ನು ಕ್ಯಾರೆಟ್ ಕಳೆ, ನಕ್ಷತ್ರ ಕಳೆ, ಬಿಳಿ ಟೋಪಿ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇದರಿಂದ ಮನುಷ್ಯರಿಗೆ ಅಲರ್ಜಿ, ಚರ್ಮರೋಗ, ಉಸಿರಾಟದ ಸಮಸ್ಯೆ ಬರುತ್ತದೆ. ಅದಕ್ಕಾಗಿ ಪಾರ್ಥೇನಿಯಂ ಕಳೆ ಸಮಗ್ರ ನಿರ್ವಹಣೆ ಅಗತ್ಯ’ ಎಂದರು. ‘ಪಾರ್ಥೇನಿಯಂ ಕಳೆ ಪ್ರಸಾರವಾಗುವುದನ್ನು ತಡೆಯಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಪಿ. ಗುಂಡಣ್ಣನವರ ಹೇಳಿದರು.

ADVERTISEMENT

‘ಚೆನ್ನಾಗಿ ಕಳಿತ ಗೊಬ್ಬರದಲ್ಲಿ ಪಾರ್ಥೇನಿಯಂ ಮೊಳಕೆಯೊಡುವುದು ಕಡಿಮೆ. ಹೂ ಬಿಡುವ ಮುಂಚೆಯೇ ಕಿತ್ತು ಹಾಕಿದರೆ, ಬೀಜೋತ್ಪಾದನೆ ಆಗುವುದಿಲ್ಲ. ಗಿಡವನ್ನು ಬೇರು ಸಹಿತ ಕಿತ್ತು ಹಾಕದಿದ್ದರೆ, ಮತ್ತೆ ಚಿಗುರುವ ಸಾಧ್ಯತೆ ಇದೆ. ಹೆಸರು ತಗಟೆ, ಗಂಡು ತಗಟೆ, ದೊಡ್ಡ ತಗಟೆ, ಗಂಗ ತುಳಸಿ, ವಿಲಾಯತಿ ತೊಗರಿ ಗಿಡ, ಅಡವಿ ನೀಲಿ ಗಿಡ, ಆವರಿಕೆ, ತಂಗಡಿ ಗಿಡ, ಮಧ್ಯಾಹ್ನ ಮಲ್ಲಿಗೆ ಗಿಡಗಳ ಬೀಜಗಳನ್ನು ಪಾರ್ಥೇನಿಯಂ ಗಿಡಗಳ ನಡುವೆ ಎರಚಬೇಕು. ಇದರಿಂದ  ಪಾರ್ಥೇ ನಿಯಂ ಗಿಡಗಳು ಕ್ರಮೇಣ ಕಡಿಮೆ ಯಾಗುತ್ತವೆ ಎಂದು ಉಪನ್ಯಾಸ ನೀಡಿದ ವಿಜ್ಙಾನಿಗಳು ಸಲಹೆ ನೀಡಿದರು. 

‘ಮೆಕ್ಸಿಕನ್ ದುಂಬಿಗಳು ಮಳೆಗಾಲ ದಲ್ಲಿ ಪಾರ್ಥೇನಿಯಂ ಗಿಡಗಳನ್ನು ತಿಂದು ಕಡಿಮೆ ಮಾಡುತ್ತವೆ. ಕಳೆನಾಶಕ ಸಿಂಪರಣೆಯಿಂದಲೂ ನಿಯಂತ್ರಿಸಬಹುದು. ಕಳೆ ಚಿಕ್ಕದಿರುವಾಗಲೇ ನಾಶಪಡಿಸಬೇಕು’ ಎಂದು ಸಲಹೆ ನೀಡಿದರು.

ಡಾ. ಕೆ. ಪಿ. ಗುಂಡಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಹರೀಶ ಡಿ. ಕೆ,  ಗೀತಾ ತಾಮಗಳೆ, ಡಾ. ವೆಂಕಣ್ಣ ಬಳಗಾನೂರ, ಕೃಷ್ಣ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.