ADVERTISEMENT

ಮನರಂಜಿಸಿದ ಇಡ್ಲಿ ತಿನ್ನುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ಮೇ 2015, 9:24 IST
Last Updated 23 ಮೇ 2015, 9:24 IST

ಅಕ್ಕಿಆಲೂರ: ಇಲ್ಲಿಯ ಲಕ್ಷ್ಮೀ ಪ್ರಸಾದ ಹೋಟೆಲ್ಲಿನ ಪುನರ್‌ ಪ್ರಾರಂಭೋತ್ಸವದ ಅಂಗವಾಗಿ ಶುಕ್ರವಾರ ಚನ್ನವೀರೇಶ್ವರ ಪ್ರಸಾದ ನಿಲಯದಲ್ಲಿ ಜರುಗಿದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ಗಬಗಬನೆ ಇಡ್ಲಿ ಬಾಯಿಗಿಳಿಸಿಕೊಳ್ಳುತ್ತಿದ್ದ ದೃಶ್ಯ ನಗು ಉಕ್ಕಿಸಿತು.

  ಗುಟ್ಕಾ, ಪಾನ್‌ಮಸಾಲಾ, ಬೀಡಾ ಮೊರೆ ಹೋಗಿರುವ ಇಂದಿನ ಯುವ ಸಮೂಹವನ್ನು ದೇಶೀಯ ಆಹಾರಗಳತ್ತ ಆಕರ್ಷಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆ ಯಶಸ್ವಿಯಾಯಿತು. ಇಡ್ಲಿ ತಿನ್ನಲು 5 ನಿಮಿಷಗಳ ಕಾಲಾವಧಿ ನಿಗದಿಗೊಳಿಸಲಾಗಿತ್ತು. ಟೇಬಲ್‌ ಮೇಲೆ 15 ಇಡ್ಲಿಗಳನ್ನು ಇಡಲಾಗಿತ್ತು. ಇಡ್ಲಿ ಯನ್ನು ಕಿವುಚಿ ತಿನ್ನುವುದನ್ನು ನಿಷೇಧಿಸಿ, ಮುರಿದುಕೊಂಡೇ ತಿನ್ನುವಂತೆ ಸೂಚನೆ ನೀಡಲಾಗಿತ್ತು.

ಸ್ಪರ್ಧಾ ಸಮಯ ಆರಂಭಗೊಳ್ಳು ತ್ತಿದ್ದಂತೆಯೇ ಸ್ಪರ್ಧಾಳುಗಳು ಒಂದಿಡೀ ಇಡ್ಲಿಯನ್ನು ಸರಾಗವಾಗಿ ಬಾಯಿಗಿಳಿ ಸುತ್ತಿದ್ದ ದೃಶ್ಯ ಕಂಡು ನೆರೆದವರು ಬೆರಗಾದರು. 5 ನಿಮಿಷದಲ್ಲಿ 22 ಇಡ್ಲಿ ಗಳನ್ನು ತಿಂದ ಕುಂದಾಪುರದ ರಮೇಶ ಮರಡಿ ಮೊದಲ ಸ್ಥಾನ ಪಡೆದರೆ, 20 ಇಡ್ಲಿ ತಿಂದ ಸ್ಥಳೀಯ ಶಿವಯೋಗಿ ಚವಟಿ 2 ನೇ, 15 ಇಡ್ಲಿ ತಿಂದ ಶಿವಯೋಗಿ ಹಿರೇಮಠ 3 ನೇ ಸ್ಥಾನ ಪಡೆದರು.

ಸಾಮಾಜಿಕ ಕಾರ್ಯಕರ್ತ ಸದಾ ನಂದ ಉಡುಪಿ ಸ್ಪರ್ಧೆ ಉದ್ಘಾಟಿಸಿದರು. ದುಂಡಿಬಸವೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ್‌ ಕೋರಿ, ನಾಗರಾಜ್‌ ಅಡಿಗ, ನಟರಾಜ್‌ ಅಡಿಗ, ದೇವರಾಜ್‌ ಅಡಿಗ, ಚನ್ನವೀರಪ್ಪ ಬೆಲ್ಲದ, ಜಯಣ್ಣ ಕೊಲ್ಲಾವರ ಸೇರಿದಂತೆ ಇತರರು ಹಾಜರಿದ್ದರು. 25 ಸ್ಪರ್ಧಾಳು ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.