ADVERTISEMENT

ಮಳೆ,ಗಾಳಿ: 2 ಮರ, 9 ಕಂಬ ಧರೆಗೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:17 IST
Last Updated 16 ಮೇ 2017, 6:17 IST

ಹಾವೇರಿ:  ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ 16 ಮನೆಗಳು ಭಾಗಶಃ ಹಾನಿಯಾಗದ್ದು, ಸುಮಾರು 9.86 ಎಕರೆ ತೋಟಗಾರಿಕಾ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ತನಕ ಕಳೆದ 24 ಗಂಟೆಗಳಲ್ಲಿ ಸರಾಸರಿ 21.08 ಮಿ.ಮೀ ಮಳೆ ಬಿದ್ದಿದೆ.

ಸವಣೂರಿನಲ್ಲಿ ಗರಿಷ್ಠ 67.7 ಮಿ.ಮೀ ಹಾಗೂ ಹಿರೇಕೆರೂರಿನಲ್ಲಿ ಕನಿಷ್ಠ 3.6 ಮಿ.ಮೀ, ಶಿಗ್ಗಾವಿ– 31.6, ಹಾವೇರಿ–22.4, ಹಾನಗಲ್– 10.4, ಬ್ಯಾಡಗಿ– 6.6 ಮತ್ತು ರಾಣೆಬೆನ್ನೂರಿನಲ್ಲಿ 5.3 ಮಿ.ಮೀ ಮಳೆಯಾಗಿದೆ.ಸೋಮವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಆದರೆ, ನಿರೀಕ್ಷೆಯಂತೆ ಮಳೆ ಸುರಿಯಲಿಲ್ಲ.

ಮರಗಳು ಧರೆಗೆ
ಸವಣೂರ: ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಎರಡು ಮರಗಳು ಹಾಗು ಒಂಬತ್ತು ಕಂಬಗಳು ಧರೆಗುರುಳಿವೆ. ಎರಡು ಮನೆಗಳ ಚಾವಣಿ ಹಾರಿ ಹೋಗಿದೆ.

ADVERTISEMENT

ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿದ್ದ ದೊಡ್ಡ ಮರ ರಸ್ತೆಗೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಈ ನಡುವೆ, ಧರೆಗುರುಳಿದ ಮರ ತೆರವುಗೊಳಿಸಲು ಮುಂದಾದ ಹೆಸ್ಕಾಂ ಸಿಬ್ಬಂದಿಗೆ ಅಂಚೆ ಕಚೇರಿಯ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಪೊಲೀಸ್ ಅಧಿಕಾರಿಗಳ ಮಧ್ಯ ಪ್ರವೇಶಿಸಿ ಮರ ತೆರವಿಗೆ ಅನುಕೂಲ ಮಾಡಿಕೊಟ್ಟರು. ಭಾನುವಾರ ತಡರಾತ್ರಿ ತನಕ ಕಾರ್ಯಾಚರಣೆ ಮುಂದುವರಿದಿತ್ತು.

ಬಿರುಗಾಳಿಯ ಹೊಡೆತಕ್ಕೆ ಪಟ್ಟಣದ ಕೊಳೆಗೇರಿ ಪ್ರದೇಶದ ಖಾದರಬಾಗ ಓಣಿಯಲ್ಲಿ ಎರಡು ಮನೆಗಳ ಚಾವಣಿ ಹಾರಿ, ಎದುರಿನ ಮನೆಗಳ ಮೇಲೆ ಬಿದ್ದಿದೆ. ಅದರ ಪರಿಣಾಮ ನೀರಿನ ಟ್ಯಾಂಕ್ ಹಾಗೂ ಹೆಂಚುಗಳು ಒಡೆದು ಅಪಾರ ನಷ್ಟ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.