ಬ್ಯಾಡಗಿ: ತಾಲ್ಲೂಕಿನಲ್ಲಿ ಈಬಾರಿಯೂ ಮಳೆ ಅಭಾವದಿಂದ ಬಿತ್ತನೆ ಕುಂಠಿತಗೊಂಡಿದೆ. ಬ್ಯಾಡಗಿ ಹೋಬಳಿಯಲ್ಲಿ ಈತನಕ ಶೇ 49ರಷ್ಟು ಮಾತ್ರ ಬಿತ್ತನೆ ಆಗಿದೆ. ಏಪ್ರಿಲ್–ಜುಲೈ ಅವಧಿಯಲ್ಲಿ ವಾಡಿ ಕೆಯಂತೆ 350.5ರಷ್ಟು ಮಳೆ ಸುರಿಯ ಬೇಕಾಗಿತ್ತು. ಆದರೆ ವರುಣನ ಅವಕೃಪೆ ಯಿಂದ ಕೇವಲ 149.5 ಮಿ.ಮೀ ಮಳೆಯಾಗಿದೆ. ಜುಲೈನಲ್ಲಿ 129ಮಿ.ಮೀ ವಾಡಿಕೆ ಮಳೆ ಸುರಿಯ ಬೇಕು. ಆದರೆ ಬಂದಿದ್ದು ಕೇವಲ 25.94ಮಿ.ಮೀ ಮಳೆ. ಕಳೆದ ವರ್ಷ ಇದೇ ಹೊತ್ತಿಗೆ 152.97ಮಿ.ಮೀ ಸುರಿದಿತ್ತು.
ತಾಲ್ಲೂಕಿನ 32,000 ಹೆಕ್ಟೇರ್ ಮುಂಗಾರು ಭೂಮಿಯ ಪೈಕಿ ಸುಮಾರು 15 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮುಗಿದಿದೆ. 1,205 ಹೆಕ್ಟೇರ್ ಮೆಕ್ಕೆ ಜೋಳ, 3,805 ಹೆಕ್ಟೇರ್ ಹೈಬ್ರಿಡ್ ಹತ್ತಿ, 116 ಹೆಕ್ಟೇರ್ ಸೋಯಾ ಅವರೆ, 89 ಹೆಕ್ಟೇರ್ ತೊಗರಿ, ಎಂಟು ಹೆಕ್ಟೇರ್ ಶೇಂಗಾ, 85 ಹೆಕ್ಟೇರ್ ಭತ್ತ, 18 ಹೆಕ್ಟೇರ್ ಹೆಸರು ಮಾತ್ರ ಬಿತ್ತನೆ ಮಾಡಲಾಗಿದೆ.
ತೇವಾಂಶ ಸಮಸ್ಯೆ: ಮುಂದೆ ಉತ್ತಮ ಮಳೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಅರೆ ಹಸಿಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ಇದೀಗ ಮಳೆ ಇಲ್ಲದೇ ಬಾಡುತ್ತಿವೆ. ಮಳೆಗಾಲದಲ್ಲೂ ತಾಪ ಮಾನ 29.5 ಡಿಗ್ರಿ ಸೆಲ್ಸಿಯಸ್ವರೆಗೂ ದಾಖಲಾಗಿದ್ದು, ಅಲ್ಲಲ್ಲಿ ಮೊಳಕೆಯೊಡೆದ ಸಸಿಗಳು ಒಣಗುತ್ತಿವೆ.
‘ಕಳೆದೆರಡು ವರ್ಷದ ಹಿಂದೆ ತಕ್ಕ ಮಟ್ಟಿಗಾದರೂ ಮಳೆಯಾಗಿತ್ತು. ಆದರೆ ಈ ವರ್ಷ ಬಿತ್ತನೆ ಮಾಡಲು ಸಾಧ್ಯ ವಾಗುತ್ತಿಲ್ಲ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಪರಿಸ್ಥಿತಿ ಹೀಗೆಯೆ ಮುಂದುವರೆದರೆ ಬದುಕುವುದಾರರೂ ಹೇಗೆ’ ಎಂದು ಚಿನ್ನಿಕಟ್ಟಿ ಗ್ರಾಮದ ರೈತ ಶ್ರೇಣಿಕರಾಜ ಯಳವತ್ತಿ ಪ್ರಶ್ನಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.