ADVERTISEMENT

ಮೊಬೈಲ್‌ ಶೌಚಾಲಯ: ಸದಸ್ಯರ ಸಲಹೆ

ನಗರಸಭೆಯ ‘2018–19ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:44 IST
Last Updated 31 ಡಿಸೆಂಬರ್ 2017, 10:44 IST

ಹಾವೇರಿ: ನಗರದಲ್ಲಿ ಸಾರ್ವಜನಿಕ ಶೌಚಾಲಯಗಳು ಇಲ್ಲದ ಕಾರಣ ಜನರು ಮೂತ್ರವಿಸರ್ಜನೆಗೂ ಪರದಾಡುವಂತಾಗಿದೆ. ಪ್ರಮುಖ ರಸ್ತೆಗಳಲ್ಲಿ ಶೌಚಾಲಯ ನಿರ್ಮಿಸಲು ಸ್ಥಳೀಯರು ಅವಕಾಶ ನೀಡುತ್ತಿಲ್ಲ. ಹೀಗಾಗಿ 2018–19ನೇ ಸಾಲಿನ ಬಜೆಟ್‌ನಲ್ಲಿ ‘ಮೊಬೈಲ್‌ ಶೌಚಾಲಯ’ಕ್ಕೆ ಹಣ ಮೀಸಲಿಡಬೇಕು ಎಂದು ನಗರಸಭೆ ಸದಸ್ಯ ಸುರೇಶ ದೊಡ್ಡಮನಿ ಸಲಹೆ ನೀಡಿದರು.

ನಗರಸಭೆಯಲ್ಲಿ ಶನಿವಾರ ನಡೆದ ‘2018–19ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆ ಯಲ್ಲಿ ಅವರು ಮಾತನಾಡಿದರು.

ಸರ್ಕಾರದ ಎಲ್ಲ ಕೆಲಸಗಳು ಗಣಕೀಕರಣವಾಗುತ್ತಿವೆ. ಅದೇ ಮಾದರಿಯಲ್ಲಿ ನಮ್ಮ ನಗರಸಭೆಯ ಕಂದಾಯ ವಸೂಲಿಯನ್ನು ಗಣಕೀಕರಣ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸದಸ್ಯ ರಮೇಶ ಕಡಕೋಳ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಬಹುದು. ಕುಡಿಯುವ ನೀರು ಸರಬರಾಜು, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಬೇಕು. ಅಲ್ಲದೇ, ಕಸ ವಿಲೇವಾರಿಗೆ ಆಧುನಿಕ ವಾಹನಗಳನ್ನು ಖರೀದಿಸಬೇಕು ಎಂದರು.

ನಗರಸಭೆ ವ್ಯಾಪ್ತಿಯ ಎಲ್ಲ ಸ್ಮಶಾನಗಳಿಗೂ ವಿದ್ಯುತ್‌ ವ್ಯವಸ್ಥೆ ಮಾಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಸಿದ ಪರಿಸರ ಎಂಜಿನಿಯರ್ ಚಂದ್ರಕಾಂತ ಗುಡ್ನವರ, 3 ಟ್ರಕ್‌ ಖರೀದಿಸುವ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ಸೇರಿಸಲಾಗಿದೆ ಎಂದರು.

ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ ಮಾತನಾಡಿ, ಶಾಂತಿ ನಗರದಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲ. ಜನ ನನಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಆದ್ದರಿಂದ, ಶಾಂತಿ ನಗರಕ್ಕೆ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಸದಸ್ಯೆ ರತ್ನಾ ಭೀಮಕ್ಕನವರ ಮಾತನಾಡಿ, ನಗರದ ಸಣ್ಣಪುಟ್ಟ ತುರ್ತು ಕಾಮಗಾರಿಗೆ ಸುಮಾರು ₨10ರಿಂದ ₨15ವರೆಗೆ ಹಣವನ್ನು ಮೀಸಲಿಡಿ ಎಂದು ಸಲಹೆ ನೀಡಿದರು.

ಸದಸ್ಯ ನಿರಂಜನ ಹೇರೂರು ಮಾತನಾಡಿ, ನಗರಸಭೆಗೆ ಆದಾಯದ ಮೂಲವೇ ಇಲ್ಲದಾಗಿದೆ. ಮೊದಲು ಅವುಗಳನ್ನು ಸರಿಪಡಿಸಿಕೊಳ್ಳಿ. ಕಳೆದ ಏಳು ವರ್ಷಗಳಿಂದ ನಗರದ ವಾಣಿಜ್ಯ ಮಳಿಗೆಗಳ ಮರು ಹರಾಜಿನ ಜೊತೆಗೆ ಬಾಡಿಗೆಯನ್ನೂ ಹೆಚ್ಚಿಸಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಶಿವಕುಮಾರಯ್ಯ, ಕಳೆದ 2008–09ರಲ್ಲಿ ವಾಣಿಜ್ಯ ಮಳಿಗೆಗೆಗಳ ಬಾಡಿಗೆಯನ್ನು ಪರಿಷ್ಕರಿಸಲಾಗಿದೆ. ಬಳಿಕ ಕ್ರಮಕೈಗೊಂಡಿಲ್. ಈ ವಾರದಲ್ಲಿ ಒಟ್ಟು 42 ಮಳಿಗೆಗಳನ್ನು ಮರು ಹರಾಜು ಮಾಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ಉಪಾಧ್ಯಕ್ಷ ಇರ್ಫಾನ್‌ ಪಠಾಣ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ದೇವಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.