ADVERTISEMENT

‘ಶೌಚಾಲಯ ಇಲ್ಲದಿದ್ದರೆ ಪಡಿತರ ವಿತರಣೆ ಸ್ಥಗಿತ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 9:53 IST
Last Updated 28 ಜನವರಿ 2017, 9:53 IST
‘ಶೌಚಾಲಯ ಇಲ್ಲದಿದ್ದರೆ ಪಡಿತರ ವಿತರಣೆ ಸ್ಥಗಿತ’
‘ಶೌಚಾಲಯ ಇಲ್ಲದಿದ್ದರೆ ಪಡಿತರ ವಿತರಣೆ ಸ್ಥಗಿತ’   

ಸವಣೂರ: ‘ಸರ್ಕಾರದಿಂದ ದುಡ್ಡು ನೀಡುತ್ತಿದ್ದರೂ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗದಿರುವುದು ವಿಪರ್ಯಾಸ. ಮುಂಬರುವ ದಿನಗಳಲ್ಲಿ ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳ ದಿದ್ದಲ್ಲಿ ಪಡಿತರ ಧಾನ್ಯ ಸ್ಥಗಿತಗೊಳಿಸುವ ಚಿಂತನೆಯಿದೆ’ ಎಂದು ಜಿಲ್ಲಾ ಉಸ್ತು ವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ತಾಲ್ಲೂಕು ಪಂಚಾಯ್ತಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ದಶಕದಿಂದಲೂ ಬಯಲು ಬಹಿರ್ದೆಸೆ ತಡೆಗಟ್ಟಲು ತಾಲ್ಲೂಕಿನ ವ್ಯಾಪ್ತಿಯಲ್ಲಿ ನೂರೆಂಟು ಕಸರತ್ತು ನಡೆದಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಗ್ರಾಮೀಣಾಭಿವೃದ್ಧಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಅಸಮರ್ಪಕವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಗ್ರಾಮೀಣ ಪ್ರದೇಶದ ಅಂಕಿ, ಸಂಖ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಶೇ 65ರಷ್ಟು ಕುಟುಂಬಗಳು ಇಂದಿಗೂ ಬಯಲು ಬಹಿರ್ದೆಸೆ
ಯನ್ನೇ ಅವಲಂಬಿಸಿವೆ ಎಂಬುದು ದೃಢಪಟ್ಟಿದೆ. ಶೌಚಾಲಯ ನಿರ್ಮಾಣದ ಕುರಿತು ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಜನತೆ ಶೌಚಾಲಯ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಬಹಿರ್ದೆಸೆಯಲ್ಲಿ ಶೌಚ ಮಾಡುವರಿಗೆ ಮಂಗಳಾರತಿ ಎತ್ತುವ ಯೋಜನೆಯನ್ನು ರೂಪಿಸುವ ಅನಿವಾರ್ಯತೆ ಬರಬಹುದು’ ಎಂದು ಎಚ್ಚರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ‘ಈಗಾಗಲೇ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾರ್ಥಿ ಜಾಡೀಕರಣ ವ್ಯವಸ್ಥೆ(ಎಸ್.ಟಿ.ಎಸ್) ರೂಪಿಸಿದ್ದು, ಈ ವ್ಯವಸ್ಥೆಯಲ್ಲಿ ಪ್ರತಿ ವಿದ್ಯಾರ್ಥಿಯ ಸಮಗ್ರ ವಿವರಗಳ ನ್ನೊಳಗೊಂಡ ಮಾಹಿತಿ ಲಭ್ಯವಾಗಲಿದೆ ಇದು ಶಿಕ್ಷಣ ಇಲಾಖೆಯ ಹೊಸ ಯೋಜನೆ’ ಎಂದು ಸಭೆಗೆ ತಿಳಿಸಿದರು.

ಈ ನಡುವೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನಾಗೇಶ ಮೋತೆ ಮಾತನಾಡಿ, ‘ತಾಲ್ಲೂಕಿನಾದ್ಯಂತ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳು 60 ಬೋರವೆಲ್ ಕೊರೆಸಿ ದರೂ ಸಹ ತಹಶೀಲ್ದಾರ್ ಅವರಿಗಾಗಲಿ, ತಾಲ್ಲೂಕು ಆಡಳಿತ ಮಂಡಳಿಗಾಗಿ ತಿಳಿಸಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಭಾಗದ ಜನತೆ ಆರೋಗ್ಯ ಕುರಿತು ವಿಶೇಷ ಕಾಳಜಿ ತೋರಿದ ಸಚಿವ ಲಮಾಣಿ, ಯಶಸ್ವಿನಿ ಕುರಿತು ಜಾಗೃತಿ ಮೂಡಿಸಿ ಹೆಚ್ಚೆಚ್ಚು ಸದಸ್ಯರನ್ನು ನೋಂದಾಯಿಸಲು ಸಹಕಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ವಾಚಿಸಿದರು. ಈ ವೇಳೆ, ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣವರ, ತಹಶೀಲ್ದಾರ್ ವಿ.ಡಿ ಸಜ್ಜನ ಉಪಸ್ಥಿತರಿದ್ದರು. ತಾ.ಪಂ ಇಓ ಎಂ.ಎಸ್ ಕುರ್ತಕೋಟಿ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.