ADVERTISEMENT

ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಕಾರಿಗೆ ಕಲ್ಲು

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 10:54 IST
Last Updated 15 ಜನವರಿ 2018, 10:54 IST
ಸ್ವಾಮೀಜಿ ಕಾರಿನ ಮುಂಭಾಗದ ಗಾಜು ಒಡೆದಿರುವ ದೃಶ್ಯ
ಸ್ವಾಮೀಜಿ ಕಾರಿನ ಮುಂಭಾಗದ ಗಾಜು ಒಡೆದಿರುವ ದೃಶ್ಯ   

ಹಾವೇರಿ: ಚೌಡಯ್ಯ ದಾನ ಪುರದಲ್ಲಿನ ಅಂಬಿಗರ ಚೌಡಯ್ಯನವರ ಐಕ್ಯಮಂಟಪಕ್ಕೆ ಭಾನುವಾರ ಪೂಜೆ ಸಲ್ಲಿಸಲು ತೆರಳಿದ್ದ ಅಂಬಿಗರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ ಅವರ ಕಾರಿನ ಮೇಲೆ ಕಲ್ಲು ತೂರಾ ಟ ಹಾಗೂ ಧರ್ಮದರ್ಶಿ ಕೃಷ್ಣ ಮೂರ್ತಿ ವಡ್ನಿಕೊಪ್ಪ ಮೇಲೆ ಹಲ್ಲೆ ನಡೆದಿದೆ.

ಚೌಡಯ್ಯದಾನಪುರ ಗ್ರಾಮದಲ್ಲಿ ಇರುವ ಒಡೆಯರ ಸಂಸ್ಥಾನ ಮಠದ ಐಕ್ಯಮಂಟಪದಲ್ಲಿ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಸ್ವಾಮೀಜಿ ಪೂಜೆ ಸಲ್ಲಿಸಲು ಮುಂದಾದಾಗ ಸ್ಥಳೀಯ ಕೆಲವರು ವಿರೋಧ ವ್ಯಕ್ತಪಡಿದರು.  ಇದನ್ನು ಪ್ರಶ್ನಿಸಿದ ಧರ್ಮದರ್ಶಿ ಕೃಷ್ಣಮೂರ್ತಿ ವಡ್ನಿಕೊಪ್ಪ ಮೇಲೆ ಹಲ್ಲೆ ನಡೆಸಿದರು. ಅಲ್ಲದೇ, ಸ್ವಾಮೀಜಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು.

‘ಒಡೆಯರ ಮಠದ ಭಕ್ತರು ಎಂದು ಹೇಳಿಕೊಂಡವರು ಹಲ್ಲೆ ನಡೆಸುತ್ತಿದ್ದರೂ, ಅಲ್ಲಿಯೇ ಇದ್ದ ಚಿತ್ರಶೇಖರ ಒಡೆಯರ ಸ್ವಾಮೀಜಿ ಮೌನವಾಗಿ ವೀಕ್ಷಿಸುತ್ತಿದ್ದರು. ಹೀಗಾಗಿ ಅವರ ಕುಮ್ಮಕ್ಕಿನ ಸಂಶಯ ಕಾಡುತ್ತಿದೆ’ ಎಂದು ಧರ್ಮದರ್ಶಿ ಕೃಷ್ಣಮೂರ್ತಿ ವಡ್ನಿಕೊಪ್ಪ ದೂರಿದರು. ‘ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಗಂಗಾಮತ ಸಮಾಜದ ಗುರುಗಳು. ಶೂದ್ರ ಸಮುದಾಯವನ್ನು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೆ ಪೂಜೆ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ. ಅಲ್ಲದೇ, ಕೆಲ ಗಂಗಾಮತಸ್ಥರನ್ನೇ ಮುಂದೆ ಬಿಡುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಗುರುಪೀಠದ ಕಾರ್ಯಾಧ್ಯಕ್ಷ ಬಸವರಾಜ ಸಪ್ಪನಗೋಳ ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.