ADVERTISEMENT

ಅನಧಿಕೃತ ವ್ಯಾಪಾರಕ್ಕೆ ಕಡಿವಾಣ ಹಾಕಿ

ಸೇಡಂ: ಪುಸ್ತಕ ವ್ಯಾಪಾರಿಗಳ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 11:23 IST
Last Updated 11 ಏಪ್ರಿಲ್ 2018, 11:23 IST

ಸೇಡಂ: ‘ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆಯ ಸ್ಥಳಗಳಲ್ಲಿ ಮುಖ್ಯಶಿಕ್ಷಕರು ಅನಧಿಕೃತವಾಗಿ ಸ್ಟೇಷನರಿ ಸಾಮಗ್ರಿ, ಸಮವಸ್ತ್ರ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದ್ದು, ಕೂಡಲೇ ಸರ್ಕಾರ ಅನಧಿಕೃತ ವ್ಯಾಪಾರವನ್ನು ತಡೆಗಟ್ಟಬೇಕು’ ಎಂದು ಸೇಡಂ ನಗರ ಪುಸ್ತಕ ವ್ಯಾಪಾರಿ ಸಂಘ ಆಗ್ರಹಿಸಿದೆ.ಈ ಕುರಿತು ಮಂಗಳವಾರ ಉಪವಿಭಾಗಾಧಿಕಾರಿ ಬಿ. ಸುಶೀಲಾ ಅವರ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

‘ಪರವಾನಗಿ ಪಡೆದು ಅನೇಕ ವರ್ಷಗಳಿಂದ ಪುಸ್ತಕ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸೇಡಂ ನಗರ ಮತ್ತು ಇತರೆ ಕಡೆಗಳಲ್ಲಿ ಖಾಸಗಿ ಆಂಗ್ಲಮಾಧ್ಯಮ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜುಗಳ ಮುಖ್ಯಶಿಕ್ಷಕರು ಮತ್ತು ಪ್ರಾಚಾರ್ಯರು ಶಾಲಾ ಮತ್ತು ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿಗಳಿಗೆ ಸಾಮಗ್ರಿ ಮತ್ತು ಸಮವಸ್ತ್ರಗಳನ್ನು ವಿತರಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ’ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ಕುರಿತು ಕಲಬುರ್ಗಿ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ವ್ಯಾಪಾರ ಮಾಡದಂತೆ ಕಟ್ಟುನಿಟ್ಟಿನ ಆದೇಶ ನೀಡಿದರೂ ಸಹ ವ್ಯಾಪಾರ ನಡೆದಿದೆ. ಅಂತಹ ಅನಧಿಕೃತ ವ್ಯಾಪಾರಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪುಸ್ತಕ ವ್ಯಾಪಾರಿಗಳ ಸಂಘದ ಶಾಂತವೀರಯ್ಯಸ್ವಾಮಿ ಬೊಮ್ಮನಳ್ಳಿ, ಸಿದ್ದಪ್ಪ ತಳ್ಳಳ್ಳಿ, ಸುರೇಶ ಮಾಲಪಾಣಿ, ಬಸವರಾಜ ಬಳಗಾರ, ರಾಜೇಂದ್ರ ಸಾರಡಾ, ರೂಪೇಶ ಸಾರಡಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.