ಅಫಜಲಪುರ: ಈ ಹಿಂದೆ ಬಿದ್ದ ಸತತ ಮಳೆ ಮತ್ತು ತಾಮ್ರ ರೋಗದಿಂದ ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿರುವ ವಿವಿಧ ಹೈಬ್ರಿಡ್ ತಳಿಯ ಹತ್ತಿ ಬೆಳೆಯ ಬೆಳವಣಿಗೆ ಕುಂಠಿತವಾಗಿ ಇಳುವರಿಯಲ್ಲಿ ಕುಸಿತವಾಗಿದೆ. ಇನ್ನೊಂದು ಕಡೆ ಮಾರುಕಟ್ಟೆಯಲ್ಲಿಯೂ ಬೆಲೆ ಕಡಿಮೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಕಳೆದ ವರ್ಷ ಹತ್ತಿ ಇಳುವರಿ ಮತ್ತು ಬೆಲೆ ಚೆನ್ನಾಗಿದ್ದು, ತೊಗರಿ ಮಾರಾಟ ಸಮಸ್ಯೆಯಿಂದಾಗಿ ರೈತರು ಕಂಗಾಲಾಗಿ ಹೆಚ್ಚಿನ ಕ್ಷೇತ್ರದಲ್ಲಿ ಪ್ರಸ್ತುತ ವರ್ಷ ಹತ್ತಿ ನಾಟಿ ಮಾಡಿದ್ದಾರೆ. ಆದರೆ, ಆರಂಭದಲ್ಲಿ 2 ತಿಂಗಳು ಮಳೆ ಬರಲಿಲ್ಲ. ಬೆಳವಣಿಗೆ ಕುಂಠಿತವಾಯಿತು. ನಂತರ ನಿರಂತರ ಮಳೆ ಬಂದಿದ್ದರಿಂದ ಹತ್ತಿಗೆ ರೋಗ ಕಾಣಿಸಿಕೊಂಡು ಹೆಚ್ಚು ಕಾಯಿ ಬಿಡಲಿಲ್ಲ. ಹೂವು ಉದರಿಹೋದವು.
ಒಂದು ಗಿಡಕ್ಕೆ ಸಾಮಾನ್ಯವಾಗಿ 50 – 60 ಕಾಯಿ ಬಿಡುತ್ತಿತ್ತು. ಆದರೆ, ಪ್ರಸ್ತುತ ವರ್ಷ 10 – 20 ಕಾಯಿಗಳು ಬಿಟ್ಟಿದೆ. ಹೀಗಾಗಿ, ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಹತ್ತಿಗೆ ₹4 ಸಾವಿರದಿಂದ ₹4,200ವರೆಗೆ ಮಾತ್ರ ಇದೆ. ಕಳೆದ ವರ್ಷ ₹ 5 ಸಾವಿರದಿಂದ ₹5,500 ಇತ್ತು. ಹೀಗಾಗಿ, ರೈತ ಹತ್ತಿ ಬೆಳೆಯಲು ಹಾಕಿದ ಬಂಡವಾಳ ಮರಳಿ ಬರುತ್ತಿಲ್ಲ ಎಂದು ರೈತರಾದ ಚಂದ್ರಾಮ ಬಳಗುಂಡೆ, ಚಂದು ಎನ್.ಕರಜಗಿ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.