ADVERTISEMENT

ಉದ್ದು, ಹೆಸರು ಖರೀದಿ ಸ್ಥಗಿತ

ಆಳಂದ: ವಿವಿಧ ಕೇಂದ್ರಗಳಲ್ಲಿ ಖಾಲಿ ಚೀಲಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:30 IST
Last Updated 16 ನವೆಂಬರ್ 2017, 10:30 IST

ಆಳಂದ: ತಾಲ್ಲೂಕಿನ ವಿವಿಧೆಡೆ ರೈತರ ಸಹಕಾರಿ ಸಂಘದ ಸಹಯೋಗದಲ್ಲಿ ರೈತರು ಬೆಳೆದ ಉದ್ದು, ಹೆಸರು ಬೆಳೆ ಖರೀದಿಯು ಚೀಲದ ಕೊರತೆಯಿಂದ ಸ್ಥಗಿತಗೊಂಡಿದೆ. ಇದರಿಂದ ಉದ್ದು ಬೆಳೆ ಬೆಳೆದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ತಾಲ್ಲೂಕಿನ ಮುನ್ನೋಳ್ಳಿ, ಕಮಲಾನಗರ, ಯಳಸಂಗಿ, ಖಜೂರಿ, ನಿಂಬಾಳ, ಮಾಡಿಯಾಳ, ನಿಂಬರ್ಗಾ, ಅಂಬಲಗಾ, ಬೆಳಮಗಿ ಮತ್ತಿತರ ಕೇಂದ್ರಗಳಲ್ಲಿ ಸರ್ಕಾರದಿಂದ ಹೆಸರು, ಉದ್ದು ಖರೀದಿಗಳು ತೆರೆಯಲಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಚೀಲದ ಕೊರತೆ ಕಾಡುತ್ತಿದೆ. ಇದರಿಂದ ಮಧ್ಯದಲ್ಲಿಯೇ ಉದ್ದು, ಹೆಸರು ಖರೀದಿ ಸ್ಥಗಿತಗೊಂಡಿದೆ. ‘ಅನೇಕ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಹೆಸರು ನೋಂದಾಯಿಸಿ ಸರದಿಗಾಗಿ ಕಾಯುತ್ತಿದ್ದಾರೆ. ಕೆಲ ರೈತರು ಖರೀದಿ ಕೇಂದ್ರಗಳಲ್ಲಿ ಉದ್ದು ಬೆಳೆ ಚೀಲ ತಂದು ಒಟ್ಟಿದ್ದಾರೆ.

ಹೆಸರು ಬೆಳೆ ಕಡಿಮೆ ಪ್ರಮಾಣದಲ್ಲಿ ಬೆಳೆದುದ್ದು, ವಿವಿಧೆಡೆ ಖರೀದಿ ನಡೆದಿದೆ. ಆದರೆ, ಉದ್ದು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆಯುವುದರಿಂದ ಖರೀದಿಗೆ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಬೇಕು’ ಎಂದು ಕಮಲಾನಗರದ ಶಿವಕುಮಾರ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಉದ್ದು ಖರೀದಿಗೆ ನ. 23 ಕೊನೆದಿನ ನೀಡಲಾದ ಕಾರಣ ರೈತರು ಸಾವಿರಾರು ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಆದರೆ, ಇಲ್ಲಿ ವರೆಗೆ ಹೆಸರು ನೋಂದಾಯಿಸಿದ ಅರ್ಧದಷ್ಟೂ ರೈತರ ಬೆಳೆ ಖರೀದಿ ನಡೆದಿಲ್ಲ. ಕೆಲವೆಡೆ ಸಹಕಾರಿ ಸಂಘ ದವರು ರಾಜಕೀಯ ಮುಖಂಡರ ಮತ್ತು ದಲ್ಲಾಳಿಗಳ ಉದ್ದು ಖರೀದಿ ನಡೆಸಿದ್ದಾರೆ ಎಂದು ರೈತರು ಆಪಾದಿಸುತ್ತಿದ್ದಾರೆ.

ಮುನ್ನೋಳ್ಳಿ ಕೇಂದ್ರದಲ್ಲಿ ಒಟ್ಟು 1,495 ಕ್ವಿಂಟಲ್‌ ಖರೀದಿ ಆಗಿದೆ. ಇದು ಹೆಸರು ನೋಂದಾಯಿಸಿದ 1,200 ರೈತರಲ್ಲಿ ಕೇವಲ 106 ರೈತರ ಬೆಳೆಯಾಗಿದೆ. ಕಮಲಾನಗರದಲ್ಲಿ ಹೆಸರು ಒಟ್ಟು 1,040 ಕ್ವಿಂಟಲ್, ಉದ್ದು 1,420 ಕ್ವಿಂಟಲ್ ಖರೀದಿಯಾಗಿದೆ.

ಖಜೂರಿ, ಯಳಸಂಗಿ, ನಿಂಬರ್ಗಾ, ಮುನ್ನೊಳ್ಳಿ ಗ್ರಾಮದ ಕೇಂದ್ರದಲ್ಲಿ ಉದ್ದು ಬೆಳೆ ಖರೀದಿ ಆರಂಭಗೊಳ್ಳದ ಕಾರಣ ರೈತರು ದಿನಕೊಮ್ಮೆ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಿಸಿ ಬರುತ್ತಿದ್ದಾರೆ. ಅದರಲ್ಲಿ ಚೀಲವನ್ನು ಕಳುಹಿಸಲು ಫೆಡರೇಷನ್‌ ಹಿಂದೇಟು ಹಾಕುತ್ತಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.