ADVERTISEMENT

ಕೇಂದ್ರೀಯ ವಿವಿ: ಸಮುದಾಯ ಬಾನುಲಿ ಕೇಂದ್ರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 6:52 IST
Last Updated 23 ಸೆಪ್ಟೆಂಬರ್ 2017, 6:52 IST

ಕಲಬುರ್ಗಿ: ಆಳಂದ ತಾಲ್ಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಮುದಾಯ ಬಾನುಲಿ ಕೇಂದ್ರ ಸ್ಥಾಪಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ ಜಾವಡೇಕರ್‌ ಸೂಚಿಸಿದರು. ಗುರುವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕುರಿತು ಕುಲಪತಿ ಅವರಿಂದ ಮಾಹಿತಿ ಪಡೆದರು.
‘ವಿಶ್ವವಿದ್ಯಾಲಯದಲ್ಲಿ ದೇಶದ ನಾನಾ ರಾಜ್ಯಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದು ಭಾರತ–ಶ್ರೇಷ್ಠ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪರಸ್ಪರ ಭಾಷೆ, ಸಂಸ್ಕೃತಿ ಮತ್ತು ಮೌಲ್ಯಗಳ ವಿನಿಮಯಕ್ಕೆ ಅನುವು ಕಲ್ಪಿಸಬೇಕು’ ಎಂದರು.

‘ಹೈ.ಕ ಪ್ರದೇಶದ ಪದವಿ ಕಾಲೇಜುಗಳಲ್ಲಿ 5 ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಅವರ ಕೌಶಲ ಅಭಿವೃದ್ಧಿಗೆ ಯಾವುದೇ ತರಬೇತಿ ಸಂಸ್ಥೆಯಿಲ್ಲ. ನಮ್ಮ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸ್ಥಾಪನೆಯ ಅವಶ್ಯಕತೆ ಇದೆ. ಇದಕ್ಕೆ ಆದಷ್ಟು ಬೇಗ ಅನುಮತಿ ನೀಡಬೇಕು’ ಎಂದು ಕುಲಪತಿ ಪ್ರೊ.ಎಚ್‌.ಎಂ. ಮಹೇಶ್ವರಯ್ಯ ಅವರು ಸಚಿವರಿಗೆ ಮನವಿ ಮಾಡಿದರು.

‘ವಿಶ್ವವಿದ್ಯಾಲಯದ ಆವರಣ ದೊಡ್ಡದಾಗಿದ್ದು, ಅದರ ನಿರ್ವಹಣೆಗೆ ಅಂದಾಜು 200 ಸಿಬ್ಬಂದಿಯ ಅಗತ್ಯ ಇದೆ. ಈಗ 100 ಜನ ಸಿಬ್ಬಂದಿಗೆ ಮಾತ್ರ ಅನುಮತಿ ನೀಡಿದ್ದು, ಇನ್ನೂ 100 ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡಬೇಕು. ವಿಶ್ವವಿದ್ಯಾಲಯಕ್ಕೆ ಶಾಶ್ವತ ನೀರು ಪೂರೈಕೆಗೆ ರಾಜ್ಯ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಬೇಕು’ ಎಂದು ಕೋರಿದರು.

ADVERTISEMENT

‘ವಿವಿ ಸಿಬ್ಬಂದಿಗೆ ಕಲಬುರ್ಗಿ ನಗರ ಸಮಾನವಾಗಿ ಮನೆ ಬಾಡಿಗೆ ಭತ್ಯೆ (ಎಚ್‌.ಆರ್‌.ಎ) ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ವಿನಂತಿಸಿದರು.
ಸಂಸದ ಭಗವಂತ ಖೂಬಾ, ಸಮಕುಲಪತಿ ಪ್ರೊ. ಜಿ.ಆರ್. ನಾಯಕ, ಕುಲಸಚಿವ ಪ್ರೊ. ಚಂದ್ರಕಾಂತ ಯಾತನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.