ಚಿಂಚೋಳಿ: ‘ರಾಜ್ಯ ಸರ್ಕಾರ ಭೂಮಿಯ ಆಳದಿಂದ ಕುಡಿಯುವ ನೀರು ತೆಗೆಯಲು ಚಿಂತನೆ ನಡೆಸಿರುವ ಪಾತಾಳ ಗಂಗೆ ಯೋಜನೆ ಸುಸ್ಥಿರ ಅಭಿವೃದ್ಧಿಗೆ ಮಾರಕವಾಗಲಿದೆ’ ಎಂದು ನಟ ಚೇತನ್ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಶಾದಿಪುರ ಕೆರೆಯಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ಭಾಗಿಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಈ ಯೋಜನೆ ಮೂಲಕ ಬಹುರಾಷ್ಟ್ರೀಯ ಕಂಪೆನಿ(ಎಂಎನ್ಸಿ)ಗಳಿಗೆ ಲಾಭ ಮಾಡಿಕೊಡುವ ಹುನ್ನಾರಕ್ಕೆ ಸರ್ಕಾರ ಮುಂದಾಗಿದೆ’ ಎಂದು ಅವರು ದೂರಿದರು.
‘ದೇಶದಲ್ಲಿ ನದಿಗಳ ಜೋಡಣೆ ಯಿಂದ 55 ಲಕ್ಷ ಜನರು ನಿರಾಶ್ರಿತ ರಾಗುವ ಅಂದಾಜಿದೆ. ಇದರಿಂದ ಪ್ರಕೃತಿಯ ಸಮತೋಲನ ತಪ್ಪಲಿದೆ. ನದಿ ಜೋಡಣೆಗೂ ವಿರೋಧವಿದೆ’ ಎಂದು ತಿಳಿಸಿದರು.
‘ನದಿಗಳ ಜೋಡಣೆಯಿಂದ ಕಾಡು ನಾಶವಾಗಲಿದೆ. ಜನರು ಅತಂತ್ರರಾಗುತ್ತಾರೆ. ₹5 ಲಕ್ಷ ಕೋಟಿ ಅಪವ್ಯಯವಾಗುತ್ತದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲವೂ ಇದರಿಂದ ಹೊರತಾಗಿಲ್ಲ’ ಎಂದು ಆರೋಪಿಸಿದರು.
‘ಯಾವ ಸರ್ಕಾರವೂ ಬಡವರ ಪರವಾಗಿಲ್ಲ. ಪರಿಸರ ಸಂರಕ್ಷಣೆ ಬಡವರಿಂದಲೇ ಸಾಧ್ಯವಿದೆ. ದೇಶದ ಚರಿತ್ರೆ ಹೇಳುವಂತೆಯೇ ನದಿ ಜೋಡಣೆ ಬದಲಾಗಿ ಜಲ ಮರುಪೂರಣವಾಗಬೇಕು. ರಾಜಸ್ತಾನದಲ್ಲಿ ರಾಜೇಂದ್ರಸಿಂಗ್ ಬಾಬು ನಡೆಸಿದ ಪ್ರಯೋಗ, ಮಹಾರಾಷ್ಟ್ರ ಮಾದರಿಯಲ್ಲಿ ಜಲಾನಯನ ಯೋಜನೆಗಳು ಎಲ್ಲ ಕಡೆ ಜಾರಿ ಮಾಡಬೇಕು’ ಎಂದರು.
ಲೇಖಕಿ ಡಾ.ಮೀನಾಕ್ಷಿ ಬಾಳಿ ಮಾತನಾಡಿ, ‘ಪಾತಳ ಗಂಗೆ ಯೋಜನೆ ಆಳಂದ ಹಾಗೂ ಇಂಡಿಯಲ್ಲಿ ಜಾರಿಯಾ ಗುತ್ತಿದೆ. ಇದರ ವಿರುದ್ಧ ಚಲೇಜಾವ್ ಚಳವಳಿ ಮಾದರಿಯಲ್ಲಿ ಆಂದೋಲನ ನಡೆಸುತ್ತೇವೆ. ನಮಗೆ ಪಾತಾಳ ಗಂಗೆ ಬೇಡ, ಆಕಾಶ ಗಂಗೆ ಬೇಕು’ ಎಂದ ಅಭಿಪ್ರಾಯಪಟ್ಟರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಪುಷ್ಪಾ ತುಳಜಪ್ಪ, ನಂದಾದೇವಿ ಮುಂಗೋಂಡಿ, ನಿಂಗಪ್ಪ ಮುಂಗೊಂಡಿ, ಅಶ್ವಿನಿ ಮದನಕರ್, ಲೇಖಕಿ ರೇಣುಕಾ ಹೆಳವರ ಇದ್ದರು.
**
ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಜಲ ಸಂರಕ್ಷಣೆ ಆಂದೋಲನಕ್ಕೆ ಮುಂದಾಗಬೇಕು. ಪರಿಸರ ಉಳಿಸಿ ಬೆಳೆಸಲು ಮಳೆನೀರು ಸಂಗ್ರಹ ಅಳವಡಿ ಸಿಕೊಳ್ಳಬೇಕು.
–ಚೇತನ್, ನಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.