ADVERTISEMENT

ಬುದ್ಧಿಗಿಂತ ಹೃದಯವಂತಿಕೆ ಮುಖ್ಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:42 IST
Last Updated 14 ಜುಲೈ 2017, 6:42 IST

ಕಲಬುರ್ಗಿ: ‘ನಂಬಿಕೆ ಮತ್ತು ವಿಶ್ವಾಸದ ಮೇಲೆ ಜಗತ್ತಿನ ಎಲ್ಲ ವ್ಯವಹಾರಗಳು ನಡೆಯುತ್ತಿವೆ. ಹೀಗಾಗಿ ಮುನಷ್ಯರು ಬುದ್ಧಿವಂತಿಕೆಗಿಂತ ಹೃದಯವಂತಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು’ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಇಲ್ಲಿನ ಶಹಾ ಬಜಾರ್‌ ಬಡಾವಣೆಯ ಶಾಂತಲಿಂಗೇಶ್ವರ ಸಂಸ್ಥಾನ ಮಠದಲ್ಲಿ 10ನೇ ವರ್ಷದ ಆಷಾಢ ಮಾಸದ ಕಾರ್ಯಕ್ರಮದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ಪ್ರವಚನ ಹಾಗೂ ಧರ್ಮ ಸಭೆಯಲ್ಲಿ ಗುರುವಾರ ಅವರು ಆಶೀರ್ವಚನ ನೀಡಿದರು.

‘ಧರ್ಮ ಮತ್ತು ದೇವರಲ್ಲಿ ನಾವು ಅಚಲವಾದ ನಂಬಿಕೆ ಇಡಬೇಕು. ಜತೆಗೆ ಮನುಷ್ಯರಲ್ಲಿ ಉದಾರವಾದ ಗುಣಗಳು ಬೆಳೆಯಬೇಕು. ಹೃದಯವಂತಿಕೆ ಇಲ್ಲದೆ ಬುದ್ಧಿವಂತಿಕೆ ಎಷ್ಟೇ ಇದ್ದರೂ ಪ್ರಯೋಜನ ಇಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಮನುಷ್ಯನ ಮನಸ್ಸು ಅರಳಬೇಕು. ಧರ್ಮದ ಮಾರ್ಗದಲ್ಲಿ ನಡೆದರೆ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಬಹುದು. ಮೌಲ್ಯಗಳು ಹಾಗೂ ಆದರ್ಶಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಣ ಗಳಿಕೆಯೊಂದೇ ಜೀವನದ ಪರಮಗುರಿ ಆಗಬಾರದು’ ಎಂದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಎಚ್‌.ವೀರಭದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಕಡಗಂಚಿಯ ವೀರಭದ್ರಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು, ಕರಿಸಿದ್ದಪ್ಪ ಪಾಟೀಲ ಹರಸೂರ, ಶಿವಶರಣಪ್ಪ ಸಿರಿ, ಶಿವಾನಂದ ಮಠಪತಿ, ಶಾರದಾ ಮಣಿ, ಶರಣಬಸಪ್ಪ ಭೂಸನೂರ, ಬಾಬುರಾವ ಮಠಪತಿ, ಆರ್‌.ಎಸ್‌. ಹೊಸಗೌಡ, ಸಿದ್ರಾಮಪ್ಪ ಆಲಗೂಡಕರ ಇದ್ದರು. ಗುರುಲಿಂಗಯ್ಯ ಹಿತ್ತಿಲಶಿರೂರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.