ಕಲಬುರ್ಗಿ: ‘ಮಹಿಳೆಯರು ಭಾಗಿಯಾಗದೆ ಸಮಾಜದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ದೇಶದ ಇತಿಹಾಸದುದ್ದಕ್ಕೂ ಇದಕ್ಕೆ ಸಾಕಷ್ಟು ನಿದರ್ಶನಗಳಿವೆ’ ಎಂದು ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದರು.
ಜಿಲ್ಲೆಯ ಆಳಂದದಲ್ಲಿ ಮಹಿಳಾ ಜನಜಾಗೃತಿ ಆಂದೋಲನ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಸ್ತ್ರೀಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
‘ಅಕ್ಕಿ ಬೇಡ, ಬೇಳೆ ಬೇಡ. ಮೊದಲು ಮದ್ಯ ನಿಷೇಧ ಮಾಡಿ ಎಂದು ತಾಲ್ಲೂಕಿನ ಗ್ರಾಮೀಣ ಮಹಿಳೆಯರು ಆರಂಭಿಸಿರುವ ಹೋರಾಟ ಮುಂದುವರಿಸಬೇಕು. ಮಹಿಳೆಯರು ಇದೇ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಕೇಳಬೇಕಾಗುತ್ತದೆ.
ಸಿದ್ದರಾಮಯ್ಯ ಜನರ ಮಾತು ಕೇಳಿಸಿಕೊಳ್ಳುತ್ತಾರೆ ಎನ್ನುವ ಅಭಿಪ್ರಾಯವಿದೆ. ಹೀಗಾಗಿ ಕೂಡಲೇ ಅವರು ಮದ್ಯ ಮಾರಾಟ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಬೇಕು’ ಎಂದರು.
‘ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ವಿಕಾಸಕ್ಕೆ ಮಹಿಳೆಯರ ಸಹಭಾಗಿತ್ವ ಅತ್ಯಂತ ಪ್ರಮುಖ. ಮಹಿಳೆಯರಿಗೆ ಕರಾಟೆ ಕಲಿಸಿದರೆ ಅತ್ಯಾಚಾರ ಪ್ರಕರಣಗಳು ನಿಲ್ಲುವುದಿಲ್ಲ. ಮಹಿಳೆಯರು ಮುಕ್ತವಾಗಿ ಓಡಾಡುವ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರೆಲ್ಲ ಒಗ್ಗಟ್ಟು ಪ್ರದರ್ಶಿಸಿದರೆ ಖಂಡಿತವಾಗಿ ಮದ್ಯ ಮಾರಾಟ ನಿಷೇಧ ಆಗುತ್ತದೆ’ ಎಂದು ಹೇಳಿದರು.
‘ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಶೌಚಾಲಯಗಳಿಲ್ಲ. ಇಂಥ ಸನ್ನಿವೇಶ ದಲ್ಲಿ ಸ್ವಚ್ಛ ಭಾರತ ಅಭಿಯಾನವು ನಾಚಿಕೆಗೀಡು’ ಎಂದ ಅವರು ‘ಏಪ್ರಿಲ್ 12 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ನಶಾ ಮುಕ್ತ ಭಾರತಕ್ಕಾಗಿ ಸಮಾವೇಶ ಏರ್ಡಿಸಲಾಗಿದೆ’ ಎಂದರು.
ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಬಿ.ಆರ್. ಪಾಟೀಲ, ಡಾ.ಶಾಂತಾ ಅಷ್ಟಗಿ ಮಾತನಾಡಿದರು. ನಾಗರತ್ನಾ ದೇಶಮಾನ್ಯ, ವಿದ್ಯಾ ಪಾಟೀಲ, ಸುನೀತಾ ಪೂಜಾರಿ, ನಾಗರತ್ನಾ ದೇಶಮಾನ್ಯೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.